ನಿಗೂಢವಾಗಿಯೇ ಉಳಿದ ಕಾರಣ..!
ಶಿವಮೊಗ್ಗ, ನ. 13: ಸಕ್ರೆಬೈಲು ಆನೆ ಬಿಡಾರದ ಆನೆಯೊಂದರ ಬಾಲಕ್ಕೆ ಉಂಟಾಗಿದ್ದ ಗಾಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನೆ ಬಿಡಾರದ ಇಬ್ಬರು ಕಾವಾಡಿಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಅಕ್ಟೋಬರ್ 17 ರಂದು ಭಾನಾಮತಿ ಆನೆ ಕಾಡಿಗೆ ಮೇಯಲು ಹೋದಾಗ ಅದರ ಬಾಲಕ್ಕೆ ಮಚ್ಚಿನಿಂದ ಹೊಡೆದಂತೆ ಗಾಯವಾಗಿತ್ತು. ಅದರ ಅರ್ಧ ಬಾಲ ಜೋತಾಡುತ್ತಿತ್ತು. ಶಸ್ತ್ರಚಿಕಿತ್ಸೆ ಬಳಿಕ ಆನೆ ಚೇತರಿಸಿಕೊಂಡಿತ್ತು.
ಈ ಕುರಿತಂತೆ ಅರಣ್ಯ ಇಲಾಖೆ ಆಂತರಿಕ ತನಿಖೆ ನಡೆಸಲು ಕ್ರಮಕೈಗೊಂಡಿತ್ತು. ಇದೀಗ ಘಟನೆ ನಡೆದು ಹಲವು ದಿನಗಳ ನಂತರ, ಸದರಿ ಆನೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಇಬ್ಬರು ಕಾವಾಡಿಗಳನ್ನು ಅಮಾನತ್ತುಗೊಳಿಸಲಾಗಿದೆ.
ನಿಗೂಢ: ಮಚ್ಚಿನೇಟಿನಿಂದ ಆನೆ ಬಾಲಕ್ಕೆ ಗಾಯವಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಕಾರಣಕರ್ತರಾದವರು ಯಾರು? ಬಾಲ ತುಂಡರಿಸುವ ಪ್ರಯತ್ನ ಮಾಡಿದ್ದು ಏಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ನಿಖರ ಉತ್ತರ ಸಿಕ್ಕಿಲ್ಲ. ಇದು ಸಂಪೂರ್ಣ ನಿಗೂಢವಾಗಿ ಪರಿಣಮಿಸಿದೆ.

