ಶಿವಮೊಗ್ಗ (shivamogga), ಜೂನ್ 30: ಶಿವಮೊಗ್ಗ ನಗರದ ರಾಷ್ಟ್ರೀಯಕೃತ ಬ್ಯಾಂಕ್ ಶಾಖೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಘಟನೆ ತಡರಾತ್ರಿ ನಡೆದಿದ್ದು, ಬೆಳಿಗ್ಗೆ ಸಿಬ್ಬಂದಿಗಳು ಕಚೇರಿಗೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ!
ಬಿ ಹೆಚ್ ರಸ್ತೆಯ ಸೆಕ್ರೇಡ್ ಹಾರ್ಟ್ ಚರ್ಚ್ ಸಮೀಪದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಕಚೇರಿಯಲ್ಲಿದ್ದ ಕಂಪ್ಯೂಟರ್, ಎಸಿ ಉಪಕರಣಗಳು, ಪೀಠೋಪಕರಣಗಳು, ಫೈಲ್ ಸೇರಿದಂತೆ ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಜೂನ್ 30 ರ ಬೆಳಿಗ್ಗೆ ಅಗ್ನಿಶಾಮಕ ದಳದ ತಂಡ ಭೇಟಿಯಿತ್ತು ಪರಿಶೀಲಿಸಿದ್ದು, ಈ ವೇಳೆಗಾಗಲೇ ಬಹುತೇಕ ಬೆಂಕಿ ನಂದಿತ್ತು ಎನ್ನಲಾಗಿದೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿಯಿತ್ತು ತಪಾಸಣೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಹಾಗೂ ಹಾನಿಯ ಪ್ರಮಾಣದ ಬಗ್ಗೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.


