ಶಿವಮೊಗ್ಗ (shivamogga), ಜೂನ್ 30: ಇತ್ತೀಚೆಗಷ್ಟೆ ಶಿವಮೊಗ್ಗ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ ಸಂದೇಶವೊಂದು ಇ-ಮೇಲ್ ಮೂಲಕ ಬಂದಿತ್ತು. ಇದರ ಬೆನ್ನಲ್ಲೇ, ಜೂನ್ 29 ರಂದು ಮತ್ತೆ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ!
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಟ್ಟಡದ ಆವರಣದಲ್ಲಿ ಪೊಲೀಸರು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದಾರೆ. ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು ಶೋಧ ಮಾಡುತ್ತಿದ್ಧಾರೆ.
ಎರಡೂ ಬಾರಿಯೂ ನ್ಯಾಯಾಲಯದ ಇ – ಮೇಲ್ ಗೆ ಬೆದರಿಕೆಯ ಸಂದೇಶ ರವಾನಿಸಲಾಗಿದೆ. ಮೊದಲು ಜೂನ್ 24 ರಂದು ಬೆದರಿಕೆಯ ಸಂದೇಶ ರವಾನಿಸಲಾಗಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಾಂಬ್ ನಿಷ್ಕ್ರೀಯ, ಶ್ವಾನ ದಳ ತಂಡವು ಕೋರ್ಟ್ ಆವರಣದಲ್ಲಿ ತಪಾಸಣೆ ನಡೆಸಿತ್ತು. ಇದೀಗ ಮತ್ತೊಮ್ಮೆ ಬೆದರಿಕೆಯ ಸಂದೇಶ ರವಾನಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೋರ್ಟ್ ಆವರಣದಲ್ಲಿ ಪೊಲೀಸರು ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಇ-ಮೇಲ್ ನಲ್ಲಿ ಈ ರೀತಿಯ ಸಂದೇಶ ರವಾನಿಸುತ್ತಿರುವವರು ಯಾರು ಎಂಬುವುದು ನಿಗೂಢವಾಗಿದ್ದು, ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳ ಇನ್ನಷ್ಟೆ ಲಭ್ಯವಾಗಬೇಕಾಗಿದೆ.


