ಶಿವಮೊಗ್ಗ, ನ. 11: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನಾಟಾ ಕಳ್ಳ ಸಾಗಾಣೆ ಮಾಡುತ್ತಿದ್ದ ಪ್ರಕರಣವೊಂದನ್ನು ಅರಣ್ಯ ಇಲಾಖೆ (ಶಂಕರ ವಲಯ) ಪತ್ತೆ ಹಚ್ಚಿದ್ದು, ಲಕ್ಷಾಂತರ ರೂ. ಮೌಲ್ಯದ ಮರದ ತುಂಡುಗಳನ್ನು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.
ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ನಿವಾಸಿ ಸಯ್ಯದ್ ಅಜೀಜ್ ಉರ್ ರೆಹಮಾನ್ ಬಂಧಿತ ಆರೋಪಿ. ಬುಲೆರೋ ಪಿಕಪ್ ವಾಹನದಲ್ಲಿ ಆರೋಪಿಯು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನಾಟಾ ತರುತ್ತಿರುವ ಕುರಿತಂತೆ ಶಿವಮೊಗ್ಗ ಅರಣ್ಯ ಇಲಾಖೆಯ ಶಂಕರ ವಲಯ ವಿಭಾಗದ ಅಧಿಕಾರಿಗಳಿಗೆ ಖಚಿತ ವರ್ತಮಾನ ಲಭಿಸಿತ್ತು.
ಶನಿವಾರ ಬೆಳಿಗ್ಗೆ ಶಿವಮೊಗ್ಗದ ಹೊರವಲಯ ಹೊಳೆಹೊನ್ನೂರು ರಸ್ತೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ, ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬೀಟೆ ಮರ ಹಾಗೂ ಅತ್ಯಂತ ಅಪರೂಪದ ಕರಿಮರ (ಡಯಾಸ್ಪರಸ್ ಸೆಬನಮ) ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಕರಿಮರದ ಮೌಲ್ಯ ಎಷ್ಟೆಂಬುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಶಂಕರ ವಲಯದ ವಲಯ ಅರಣ್ಯಾಧಿಕಾರಿ ಸುಧಾಕರ್ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

