ಶಿಕಾರಿಪುರ (shikaripura), ಡಿಸೆಂಬರ್ 2: ರಸ್ತೆ ಬದಿ ಬಿದ್ದಿದ್ದ ನಾಡಬಾಂಬ್ ವೊಂದು, ಕೆಎಸ್ಆರ್’ಟಿಸಿ ಬಸ್ ಮುಂಭಾಗದ ಟೈರ್’ಗೆ ಸಿಲುಕಿ ಸ್ಪೋಟಿಸಿದ ಘಟನೆ, ಡಿಸೆಂಬರ್ 1 ರ ಸಂಜೆ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ನಡೆದಿದೆ.
ಶಿಕಾರಿಪುರ ಕೆಎಸ್ಆರ್’ಟಿಸಿ ಡಿಪೋಗೆ ಸೇರಿದ ಕೆಎ 17 ಎಫ್ 1717 ನೊಂದಣಿಯ ಬಸ್, ಸಂಜೆ ಶಿಕಾರಿಪುರ ಪಟ್ಟಣದಿಂದ ಮುಡುಬಸಿದ್ದಾಪುರ ಮಾರ್ಗದಲ್ಲಿ ಎಂದಿನಂತೆ ಸಂಚರಿಸಿತ್ತು.
ವಿವಿಧ ಗ್ರಾಮಗಳ ಶಾಲಾ – ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರನ್ನು ಇಳಿಸಿ, ಮತ್ತೆ ಹಿರೇಕಲವತ್ತಿ ಗ್ರಾಮ ಮಾರ್ಗವಾಗಿ ಸಂಜೆ 7 ಗಂಟೆ ಸುಮಾರಿಗೆ ಬಸ್ ಶಿಕಾರಿಪುರ ಪಟ್ಟಣಕ್ಕೆ ಹಿಂದಿರುಗುತ್ತಿತ್ತು.
ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ನಾಡಬಾಂಬ್ ವೊಂದು, ಬಸ್ ಮುಂಭಾಗದ ಚಕ್ರದಡಿ ಸಿಲುಕಿ ಸಿಡಿದಿದೆ. ಬಸ್ ಹಿಂಭಾಗ ಆಗಮಿಸುತ್ತಿದ್ದ ಬೈಕ್ ಚಾಲಕನೋರ್ವ ಇದನ್ನು ಗಮನಿಸಿ, ಬಸ್ ಚಾಲಕನಿಗೆ ಮಾಹಿತಿ ನೀಡಿದ್ದಾನೆ.
ಘಟನೆಯಲ್ಲಿ ಬಸ್ ಗೆ ಯಾವುದೇ ಹಾನಿಯಾಗಿಲ್ಲ. ಹಾಗೆಯೇ ಬಸ್ ನಲ್ಲಿದ್ದ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ನಿಗೂಢ : ಸದ್ಯ ಸ್ಫೋಟಗೊಂಡಿರುವ ನಾಡಬಾಂಬ್ ಕಡಿಮೆ ತೀವ್ರತೆಯದ್ದಾಗಿದೆ. ಇದರಿಂದ ಬಸ್ ಗೆ ಯಾವುದೇ ಹಾನಿಯಾಗಿಲ್ಲವೆಂದು ಎಂದು ತಿಳಿದುಬಂದಿದೆ. ಜಮೀನುಗಳಲ್ಲಿ ಕಾಡು ಹಂದಿಗಳ ಹಾವಳಿ ತಡೆಗೆ ಕೆಲವರು ಗುಪ್ತವಾಗಿ ನಾಡ ಬಾಂಬ್ ಬಳಕೆ ಮಾಡುತ್ತಾರೆ ಎಂಬ ಮಾಹಿತಿಯಿದೆ.
ಯಾರೋ ನಾಡ ಬಾಂಬ್ ಕೊಂಡೊಯ್ಯುವಾಗ ಆಕಸ್ಮಿಕವಾಗಿ ರಸ್ತೆಯಲ್ಲಿ ಬೀಳಿಸಿಕೊಂಡಿರಬಹುದು ಅಥವಾ ಯಾರಾದರೂ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ರಸ್ತೆಯಲ್ಲಿಟ್ಟಿದ್ದಾರೆಯೇ ಎಂಬುವುದು ಪೊಲೀಸರ ತನಿಖೆಯ ನಂತರವಷ್ಟೆ ತಿಳಿದುಬರಬೇಕಾಗಿದೆ.
Shimoga, December 2: A country bomb lying on the side of the road hit the front tire of a KSRTC bus and exploded on the evening of December 2 in Hirekalavatti village of Shikaripura taluk. The bus, registered KA 17 F 1717, belonging to the Shikaripura KSRTC depot, was plying as usual on the Mudubasiddapur route from Shikaripura town in the evening.

