ಶಿವಮೊಗ್ಗ, ಜ. 10: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಜ. 9 ರಂದು ಭಜರಂಗದಳ ಕಾರ್ಯಕರ್ತ ಸುನೀಲ್ ಎಂಬ ಯುವಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ ವಿಫಲ ಯತ್ನ ನಡೆಸಿದ ಘಟನೆಗೆ ಸಂಬಂಧಿಸಿದಂತೆ, ಮುಖ್ಯ ಆರೋಪಿ ಸಮೀರ್ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವಿಷಯವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ. ಈ ಕುರಿತಂತೆ ಮಂಗಳವಾರ ಬೆಳಿಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಮೀರ್, ಇಮಿಯಾನ್ ಹಾಗೂ ಮನ್ಸೂರ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಸಾಗರ ಪಟ್ಟಣದ ಆಭರಣ ಜ್ಯುವೆಲರ್ಸ್ ಎದುರು ಆರೋಪಿ ಸಮೀರ್, ಹಾಡಹಗಲೇ ಮಾರಕಾಸ್ತ್ರದಿಂದ ಭಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆಗೆ ಯತ್ನಿಸಿದ್ದ. ಕೂದಲೆಳೆ ಅಂತರದಲ್ಲಿ ಸುನೀಲ್ ಅನಾಹುತದಿಂದ ಪಾರಾಗಿದ್ದ . ಸದರಿ ಘಟನೆಯು ದೃಶ್ಯವು ಸಮೀಪದ ಕಟ್ಟಡದ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದರಿ ವೀಡಿಯೋ ವೈರಲ್ ಆಗಿತ್ತು.

