ಭದ್ರೆ ಜಾರಿಗೆ ಎಲ್ಲ ಪಕ್ಷಗಳ ಕೊಡುಗೆ ಇದೆ : ಸಿಎಂ ಬೊಮ್ಮಾಯಿ ಹೇಳಿಕೆಗೆ ಕೋದಂಡರಾಮಯ್ಯ ಆಕ್ಷೇಪ

ಚಿತ್ರದುರ್ಗ, ಫೆ.3:1960ರ ದಶಕದಿಂದಲೂ ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಂಸದ ಪಿ.ಕೋದಂಡರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಶುಕ್ರವಾರ ಹೇಳಿಕೆ ನೀಡಿರುವ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 5300 ಕೋಟಿ ರೂ. ಮೀಸಲಿಟ್ಟಿರುವುದು ಸ್ವಾಗತರ್ಹ. ಅದನ್ನು ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸಿದ್ದಾರೆ. ಇಂತಹ ಸಂದರ್ಭ ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಇಳಿಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯೋಜನೆ ಜಾರಿಗೆ ಚಿತ್ರದುರ್ಗ ಜಿಲ್ಲೆ ಜನರು, ಸಂಘ-ಸಂಸ್ಥೆಗಳು ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ದಶಕಗಳ ಕಾಲ ನಡೆಸಿದ ಚಳವಳಿಯೇ ಮುಖ್ಯ ಕಾರಣ ಎಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದಿತ್ತು.

ಎಸ್.ನಿಜಲಿಂಗಪ್ಪ ಅವರು 60ರ ದಶಕದಲ್ಲಿ ಎರಡು ಬಾರಿ ಸಿಎಂ ಆಗಿದ್ದರೂ ಯೋಜನೆ ಜಾರಿಗೆ ಯಾಕೆ ಮುಂದಾಗಲಿಲ್ಲ ಎಂಬ ಅಭಿಪ್ರಾಯ ಜನರ ಮನದಲ್ಲಿ ಈಗಲೂ ಇದೆ. ಅದನ್ನು ತಾವು ನೇರವಾಗಿ ಪ್ರಸ್ತಾಪ ಮಾಡಬಹುದಿತ್ತು. ಆದರೆ, ರಾಜಕೀಯ ಕಾರಣಕ್ಕಾಗಿ ಪಕ್ಷವೊಂದರ ವಿರುದ್ಧ ಟೀಕೆಗೆ ಮುಂದಾಗಿರುವುದು ಸರಿಯಲ್ಲ.

ಯೋಜನೆ ಜಾರಿಗೆ ನಿರ್ಲಕ್ಷ್ಯ ವಹಿಸಿದ ಸಾಲಿನಲ್ಲಿ ಎಲ್ಲ ಪಕ್ಷಗಳು ಇವೆ ಎಂಬ ವಾಸ್ತವ ಸತ್ಯವನ್ನು ಮುಖ್ಯಮಂತ್ರಿ ತಿಳಿಯಬೇಕಿತ್ತು.

ರಾಜಕಾರಣಿಗಳು, ಜನಪ್ರತಿನಿಧಿಗಳ ಕುರಿತು ಜಿಲ್ಲೆಯ ಜನ ನಂಬಿಕೆಯೆ ಕಳೆದುಕೊಂಡಿದ್ದ ಕಾಲಘಟ್ಟದಲ್ಲಿ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಆದರ್ಶಗಳಿಗೆ ಆಕರ್ಷಿತನಾಗಿ ಐಪಿಎಸ್ ಹುದ್ದೆಗೆ 1996ರಲ್ಲಿ ರಾಜೀನಾಮೆ ನೀಡಿ, ಲೋಕಸಭೆ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದರ್ಭ, ನನ್ನನ್ನು ಗೆಲ್ಲಿಸಿದರೆ ಭದ್ರಾ ಮೇಲ್ದಂಡೆ ನೀರಾವರಿ ಹಾಗೂ ದಾವಣಗೆರೆ-ಚಿತ್ರದುರ್ಗ ನೇರ ರೈಲು ಮಾರ್ಗ ಯೋಜನೆಗಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸುವೆ ಎಂದು ಭರವಸೆ ನೀಡಿದ್ದೇ.

ಅದರಂತೆ ಸಂಸತ್ ಸದಸ್ಯನಾಗಿ ಆಯ್ಕೆಯಾದ ಬಳಿಕ ಲೋಕಸಭೆಯಲ್ಲಿ ಈ ಎರಡು ಯೋಜನೆ ಕುರಿತು ಪ್ರಥಮ ಬಾರಿಗೆ ಧ್ವನಿಯೆತ್ತಿ ಸರ್ಕಾರದ ಗಮನ ಸೆಳೆದಿದ್ದೇ. ದುರಾದೃಷ್ಟವಶಾತ್ ಲೋಕಸಭೆ ವಿಸರ್ಜನೆಗೊಂಡ ಪರಿಣಾಮ ಜನಪ್ರತಿನಿಧಿಯಾಗಿ ಲೋಕಸಭೆಯಲ್ಲಿ  ಹೋರಾಟ ನಡೆಸುವ ಅವಕಾಶ ನನ್ನ ಕೈತಪ್ಪಿತು. ಜನರಿಗೆ ಕೊಟ್ಡ ಭರವಸೆ ಈಡೇರಿಸಲು ಅನಿವಾರ್ಯವಾಗಿ ಜನಹೋರಾಟಕ್ಕೆ ಧುಮುಕುವ ಸಂದರ್ಭ ಸೃಷ್ಟಿ ಆಯ್ತು.

 ಅದರ ಪರಿಣಾಮ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷನಾಗಿ ಬೀದಿಯಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ನಿರಂತರ ಹೋರಾಟ ನಡೆಸಿದ್ದೇನೆ. ಇದಕ್ಕೆ ಜಿಲ್ಲೆಯ ಜನ, ಸಂಘ-ಸಂಸ್ಥೆಗಳ ಮುಖಂಡರು, ಪತ್ರಕರ್ತರು, ಮಠಾಧೀಶರು ಹಾಗೂ ದಿವಂಗತ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್, ಎಸ್.ಎಂ.ಸದಾನಂದಯ್ಯ, ಬಿ.ಟಿ.ಚನ್ನಬಸಪ್ಪ ಸೇರಿ ಅನೇಕ ನಾಯಕರು ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಬೆಂಬಲಿಸಿದ್ದಾರೆ. ಎಲ್ಲ ಪಕ್ಷದ ರಾಜಕಾರಣಿಗಳು ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಹಿರಿಯೂರು ರೈತರು ನೂರಾರು ದಿನಗಳ ಕಾಲ ಧರಣಿ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಎಲ್ಲದರ ಫಲ ಯೋಜನೆ ಜಾರಿ ಆಗಿದೆ ಎಂಬುದಷ್ಟೇ ಕಟು ಸತ್ಯ.

 ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರೊಂದಿಗೆ ವಿಧಾನಸಭೆಯಲ್ಲಿ ಸಮಿತಿ ಹಲವು ಸಭೆ ನಡೆಸಿ ಯೋಜನೆ ಜಾರಿಗೆ ಒತ್ತಾಯಿಸಿತ್ತು. ಮುಖ್ಯವಾಗಿ ಹೋರಾಟ ಸಮಿತಿ ಅಧ್ಯಕ್ಷನಾಗಿ ಅಧ್ಯಯನ ನಡೆಸಿ ನೀರಿನ ಲಭ್ಯತೆ ಕುರಿತು ಎಚ್.ಕೆ.ಪಾಟೀಲ್ ಅವರಿಗೆ ಖಚಿತ ಮಾಹಿತಿ ನೀಡಿದ್ದರ ಪರಿಣಾಮ 2003, ಸೆಪ್ಟೆಂಬರ್ ತಿಂಗಳಲ್ಲಿ ಭದ್ರಾ ಯೋಜನೆ ಜಾರಿಗೆ ಸರ್ಕಾರ ಘೋಷಣೆ ಮಾಡಿತು.

 ಬಳಿಕ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಈಗಿನ ಮುಖ್ಯಮಂತ್ರಿಗಳಾದ ತಾವು ಕೂಡ ಯೋಜನೆ ಜಾರಿಗೆ ವಿವಿಧ ಹಂತದಲ್ಲಿ ಸಹಕರಿಸಿದ್ದೀರಾ. ಆ ಕುರಿತು ನಮ್ಮಲ್ಲಿ ಹಾಗೂ ಜಿಲ್ಲೆಯ ಜನರಲ್ಲಿ ಕೃತಜ್ಞತಾ ಭಾವನೆ ಇದೆ. ಆದರೆ, ಯೋಜನೆ ಜಾರಿ ಒಂದು ಪಕ್ಷದ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನ ಮತ್ತು ಮತ್ತೊಂದು ಪಕ್ಷ ಏನು ಮಾಡಿಯೇ ಇಲ್ಲವೆಂಬ ತಮ್ಮ ಹೇಳಿಕೆ ನ್ಯಾಯಸಮ್ಮತವಲ್ಲ. ಎಲ್ಲ ಪಕ್ಷಗಳು ಯೋಜನೆ ಜಾರಿಗೆ ತನ್ನ ಕಾಲಘಟ್ಟದಲ್ಲಿ ನೀಡಿದ ಕೊಡುಗೆಯನ್ನು ಮರೆಮಾಚುವುದು ಮುಖ್ಯಮಂತ್ರಿ ಹುದ್ದೆಗೆ ಗೌರವ ತರುವುದಿಲ್ಲ.

 ಜೊತೆಗೆ ಅನಗತ್ಯ ವಿವಾದಕ್ಕೆ ಎಡೆಮಾಡಿಕೊಡುವ ಜೊತೆಗೆ ಜನರ ಹೋರಾಟಕ್ಕೆ ಅಪಮಾನ ಮಾಡಿದಂತೆ ಆಗುತ್ತದೆ ಎಂಬುದನ್ನು ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕು ಎಂದು ಹೇಳಿರುವ ಕೋದಂಡರಾಮಯ್ಯ, ಸಾಂವಿಧಾನಿಕ ಸ್ಥಾನದಲ್ಲಿರುವವರು ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಲಾಭ ಪಡೆಯಲು ಆಧಾರ ರಹಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →