ಶಿವಮೊಗ್ಗ, ಆ. 28: ಗಾಜಿನ ಚೂರಿನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಗಸ್ತಿನಲ್ಲಿದ್ದ ಇ.ಆರ್.ಎಸ್.ಎಸ್ ವಾಹನದ ಸಿಬ್ಬಂದಿಗಳಿಬ್ಬರು ರಕ್ಷಿಸಿ, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ಸೋಮವಾರ ನಡೆದಿದೆ.
17 ವರ್ಷ ವಯೋಮಾನದ ಯುವತಿಯೇ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ವಿನೋಬನಗರ ಪೊಲೀಸ್ ಠಾಣೆ ಪೇದೆ ರಾಘವೇಂದ್ರ ಹಾಗೂ ವಾಹನ ಚಾಲಕ ಎ.ಹೆಚ್.ಸಿ. ಚನ್ನಕೇಶವ ಸಕಾಲದಲ್ಲಿ ನೆರವಾದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ.
ಸದರಿ ಸಿಬ್ಬಂದಿಗಳು ಇ.ಆರ್.ಎಸ್.ಎಸ್ ವಾಹನದಲ್ಲಿ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ಗಸ್ತಿನಲ್ಲಿದ್ದಾಗ, ಫ್ರೀಡಂ ಪಾರ್ಕ್ ನಲ್ಲಿ ಯುವತಿಯೋರ್ವಳು ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ.
ತಕ್ಷಣವೇ ಯುವತಿಯನ್ನು ವಾಹನದಲ್ಲಿಯೇ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಜೀವ ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿಗಳ ಸಕಾಲಿಕ ನೆರವಿಹಸ್ತಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಅಭಿನಂದಿಸಿದ್ದಾರೆ.

