ಶಿವಮೊಗ್ಗ / ತೀರ್ಥಹಳ್ಳಿ, ಅ. 5: ಇತ್ತೀಚೆಗಷ್ಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ, ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥಗೌಡ ಅವರಿಗೆ ಸೇರಿದ ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿರುವ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳ ತಂಡ ಗುರುವಾರ ಮುಂಜಾನೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ,
ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ಮನೆ, ಹಣಗೆರೆಕೆಟ್ಟೆ ಸಮೀಪದ ಕರಕುಚ್ಚಿ ಮನೆ, ಶಿವಮೊಗ್ಗದ ಶರಾವತಿ ನಗರದಲ್ಲಿರುವ ಸಂಬಂಧಿ ಮನೆ ಹಾಗೂ ಕಚೇರಿಗಳಲ್ಲಿ ಇಡಿ ಅಧಿಕಾರಿಗಳ ತಂಡ ತಪಾಸಣೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಐದಾರು ತಂಡ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಶಸ್ತ್ರಸಜ್ಜಿತ ಪೊಲೀಸರ ಭದ್ರತೆಯೊಂದಿಗೆ ಇಡಿ ತಂಡ ಆರ್.ಎಂ.ಮಂಜುನಾಥಗೌಡರ ನಿವಾಸಗಳಲ್ಲಿ ತಪಾಸಣೆ ನಡೆಸುತ್ತಿದೆ.
ಡಿಸಿಸಿ ಬ್ಯಾಂಕ್ ನಲ್ಲಿ ಕಳೆದ ಹಲವು ವರ್ಷಗಳ ಹಿಂದೆ ನಡೆದ ನಕಲಿ ಬಂಗಾರ ಅಡಮಾನ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.

