ಗರ್ಭೀಣಿ ಆನೆ ಪ್ರಕರಣ : ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ – ಸಚಿವರಿಗೆ ದೂರು!

ಶಿವಮೊಗ್ಗ, ಅ. 24: ದಸರಾ ವಿಜಯ ದಶಮಿ ಮೆರವಣಿಗೆಗೆ ಸಕ್ರೆಬೈಲು ಆನೆ ಬಿಡಾರದಿಂದ ಕಳೆದ ಕೆಲ ದಿನಗಳ ಹಿಂದೆ ಕರೆ ತಂದಿದ್ದ ನೇತ್ರಾವತಿ ಆನೆ ಸೋಮವಾರ ರಾತ್ರಿ ಮರಿ ಹಾಕಿದ್ದು, ಮಂಗಳವಾರ ಬೆಳಿಗ್ಗೆಯೇ ಆನೆ ಹಾಗೂ ಮರಿಯನ್ನು ಶಿವಮೊಗ್ಗ ನಗರದಿಂದ ಮತ್ತೇ ಬಿಡಾರಕ್ಕೆ ಕರೆದೊಯ್ಯಲಾಗಿದೆ.

ಈ ನಡುವೆ, ತುಂಬು ಗರ್ಭೀಣಿ ಆನೆಯನ್ನು ವಿಜಯ ದಶಮಿ ಮೆರವಣಿಗೆಗೆ ಕರೆತಂದ ಅರಣ್ಯ ಇಲಾಖೆ ವಿರುದ್ದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತಂತೆ ಸಕ್ರೆಬೈಲ್ ನ ವನ್ಯಜೀವಿ ವೈದ್ಯರಿಗೆ ಕನಿಷ್ಠ ಮಾಹಿತಿಯೂ ಇರಲಿಲ್ಲವೇಕೆ? ಸದರಿ ಪ್ರಕರಣದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ಅನುಸರಿಸಿದೆ ಎಂದು ನಾಗರೀಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಆಗ್ರಹ: ಗರ್ಭೀಣಿ ಆನೆಯನ್ನು ವಿಜಯದಶಮಿ ಮೆರವಣಿಗೆಗೆ ಕರೆತಂದು ಪೂರ್ವಭಾವಿ ತಾಲೀಮು ಕಾರ್ಯಕ್ಕೆ ಬಳಕೆ ಮಾಡಿದ್ದಕ್ಕೆ ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ತೋರಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಅರಣ್ಯ ಖಾತೆ ಸಚಿವರಿಗೆ ಆಗ್ರಹಿಸಿದ್ದಾರೆ.

ಮಂಗಳವಾರ ಈ ಕುರಿತಂತೆ ಪ್ರಕಟಣೆ ನೀಡಿರುವ ಅವರು, ‘ತುಂಬು ಗರ್ಭೀಣಿ ಆನೆಯನ್ನು ಮೆರವಣಿಗೆಗೆ ಕಳುಹಿಸಿದ ಅರಣ‍್ಯ ಇಲಾಖೆ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿ ಹಾಗೂ ನಿರ್ದಯವಾಗಿ ನಡೆದುಕೊಂಡಿದ್ದಾರೆ. ಆನೆ ರಾತ್ರಿಯೇ ಮರಿ ಹಾಕಿದ್ದರಿಂದ ಸಂಭಾವ್ಯ ಜೀವ ಅನಾಹುತವೊಂದು ತಪ್ಪಿದಂತಾಗಿದೆ.

ಗರ್ಭೀಣಿ ಆನೆಯನ್ನು ಮೆರವಣಿಗೆಗೆ ಕಳುಹಿಸಿದ ಅರಣ್ಯ ಇಲಾಖೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು. ದೂರು ದಾಖಲಿಸಿ ಬಂಧಿಸಬೇಕು. ಮೆರವಣಿಗೆಗೆ ಆನೆಗಳ ಬಳಕೆ ನಿಷೇಧಿಸಬೇಕು’ ಎಂದು ಅರಣ‍್ಯ ಇಲಾಖೆ ಸಚಿವರಿಗೆ ಆಗ್ರಹಿಸಿದ್ದಾರೆ.

ಆನೆ ಅಂಬಾರಿ ರದ್ದು: ಈ ಮೊದಲು ನಿರ್ಧರಿಸಿದ್ದಂತೆ, ವಿಜಯ ದಶಮಿ ಮೆರವಣಿಗೆಯಲ್ಲಿ ಸಾಗರ್ ಆನೆ ಅಂಬಾರಿ ಹೊರಬೇಕಾಗಿತ್ತು. ನೇತ್ರಾವತಿ ಹಾಗೂ ಹೇಮಾವತಿ ಆನೆಗಳು ಸಾಗರ್ ಆನೆ ಇಕ್ಕೆಲದಲ್ಲಿ ಸಾಗಬೇಕಾಗಿತ್ತು. ಆದರೆ ನೇತ್ರಾವತಿ ಆನೆ ಮರಿ ಹಾಕಿದ್ದರಿಂದ ಸಾಗರ್ ಆನೆ ಮೇಲೆ ಅಂಬಾರಿ ಹೊರಸದಿರುವ ನಿರ್ಧಾರ ಕೈಗೊಳ್ಳಲಾಗಿದೆ.

ಅಲಂಕೃತ ವಾಹನದ ಮೇಲೆ ಚಾಮುಂಡೇಶ್ವರಿ ದೇವಿಯ ವಿಗ್ರಹ ಕೊಂಡೊಯ್ಯುವ ಹಾಗೂ ಸಾಗರ್ ಮತ್ತು ಹೇಮಾವತಿ ಆನೆಯನ್ನು ಮೆರವಣಿಗೆಯಲ್ಲಿ ಕರೆತರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಬಿಡಾರದಿಂದ ಬಂದಿದ್ದ ಮೂರು ಆನೆಗಳು

ಶಿವಮೊಗ್ಗ ದಸರಾ ವಿಜಯ ದಶಮಿ ಮೆರವಣಿಗೆಗಾಗಿ, ಮೂರು ಆನೆಗಳನ್ನು ಸಕ್ರೆಬೈಲು ಆನೆ ಬಿಡಾರದಿಂದ ಕರೆತರಲಾಗಿತ್ತು. ಇದರಲ್ಲಿ ಸಾಗರ್ ಆನೆ ಅಂಬಾರಿ ಹೊರಬೇಕಾಗಿತ್ತು. ನೇತ್ರಾವತಿ ಹಾಗೂ ಹೇಮಾವತಿ ಆನೆಗಳು ಇದಕ್ಕೆ ಸಾಥ್ ನೀಡಬೇಕಾಗಿತ್ತು. ಇದಕ್ಕಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಆನೆಗಳನ್ನು ಓಡಾಡಿಸಿ ತಾಲೀಮು ನಡೆಸಲಾಗಿತ್ತು. ಇದೀಗ ನೇತ್ರಾವತಿ ಆನೆ ಮರಿ ಹಾಕಿರುವುದರಿಂದ ಜಂಬೂ ಸವಾರಿಯ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗುವಂತಾಗಿದೆ. 

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *