
ಮಲೆನಾಡಿನಲ್ಲಿ ಕಡಿಮೆಯಾದ ಮಳೆ ಅಬ್ಬರ..!
ಶಿವಮೊಗ್ಗ (shivamogga), ಜು. 28: ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದ (heavy rainfall) ಮಲೆನಾಡಿನ (malnad) ವಿವಿಧೆಡೆ, ವರ್ಷಧಾರೆ ಅಬ್ಬರ ಕಡಿಮೆಯಾಗಿದೆ. ಇದರಿಂದ ಉಕ್ಕಿ ಹರಿಯುತ್ತಿದ್ದ ನದಿ, ಕೆರೆಕಟ್ಟೆಗಳ ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ. ಡ್ಯಾಂಗಳ ಒಳಹರಿವು ತಗ್ಗಿದೆ. ಮತ್ತೊಂದೆಡೆ, ಶಿವಮೊಗ್ಗದಲ್ಲಿ ಪ್ರವಾಹದ (flood) ಭೀತಿ ಸೃಷ್ಟಿಸಿದ್ದ ತುಂಗಾ ನದಿ ನೀರಿನ ಹರಿವಿನಲ್ಲಿಯೂ ಕುಸಿತವಾಗಿದೆ.
ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಾದ ಮಾಣಿ (mani) ಯಲ್ಲಿ 33 ಮಿಲಿ ಮೀಟರ್ (ಮಿ.ಮೀ.), ಯಡೂರು (yadur) 35 ಮಿ.ಮೀ, ಹುಲಿಕಲ್ (hulikallu) 39 ಮಿ.ಮೀ., ಮಾಸ್ತಿಕಟ್ಟೆಯಲ್ಲಿ (masthikatte) 36 ಮಿ.ಮೀ. ವರ್ಷಧಾರೆಯಾಗಿದೆ.
ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ, ಲಿಂಗನಮಕ್ಕಿ ಡ್ಯಾಂನ (linganamakki dam) ಒಳಹರಿವು 37,733 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಶನಿವಾರ ಈ ಪ್ರಮಾಣ 85 ಸಾವಿರ ಕ್ಯೂಸೆಕ್ ನಷ್ಟಿತ್ತು. ಪ್ರಸ್ತುತ ಡ್ಯಾಂ ನೀರಿನ ಮಟ್ಟ 1808. 05 (ಗರಿಷ್ಠ ಮಟ್ಟ : 1819) ಅಡಿಯಿದೆ. 3525 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ (out flow).
ತುಂಗಾ ಜಲಾಶಯದ (tunga dam) ಒಳಹರಿವು 36,489 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ (inflow) ನೀರನ್ನು ಹೊಸಪೇಟೆಯ ತುಂಗಾಭದ್ರಾ ಜಲಾಶಯಕ್ಕೆ (tungabhadra dam) ಬಿಡಲಾಗುತ್ತಿದೆ. ಉಳಿದಂತೆ ಭದ್ರಾ ಡ್ಯಾಂನ (bhadra dam) ಒಳಹರಿವು 35,557 ಕ್ಯೂಸೆಕ್ ಇದೆ. ನೀರಿನ ಮಟ್ಟ 180 ಅಡಿ 7 ಇಂಚು ತಲುಪಿದೆ. ಡ್ಯಾಂ ಗರಿಷ್ಠ ಮಟ್ಟವಾದ 186 ಅಡಿ ತಲುಪಲು ಇನ್ನೂ ಕೇವಲ 6 ಅಡಿ ಬಾಕಿಯಿದೆ.
ಇಳಿಕೆ : ಶನಿವಾರ ತುಂಗಾ ಜಲಾಶಯದಿಂದ 85 ಸಾವಿರ ಕ್ಯೂಸೆಕ ನೀರು ಹೊರಬಿಡಲಾಗಿತ್ತು. ಇದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿದ್ದ ತುಂಗಾ ನದಿ ಪ್ರವಾಹ ಭೀತಿ ಮೂಡಿಸಿತ್ತು. ಹಲವೆಡೆ ನದಿ ಪಾತ್ರದ ಕೆಲ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿತ್ತು. ಆದರೆ ಮಳೆ ಕಡಿಮೆಯಾದ ಕಾರಣದಿಂದ, ಭಾನುವಾರ ತುಂಗಾ ನದಿ ನೀರಿನ ಹರಿವಿನಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ತಗ್ಗು ಪ್ರದೇಶಗಳಲ್ಲಿನ ಜಲಾವೃತ ಭೀತಿ ದೂರಾಗುವಂತೆ ಮಾಡಿದೆ.