
shimoga | ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ : ಶಿವಮೊಗ್ಗ ತಹಶೀಲ್ದಾರ್ ದಿಢೀರ್ ದಾಳಿ!
ಶಿವಮೊಗ್ಗ (shivamogga), ಜ. 9: ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಸಮೀಪದ ತುಂಗಭದ್ರಾ ನದಿಯಲ್ಲಿ ಭಾರೀ ಪ್ರಮಾಣದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ದೂರಿನ ಹಿನ್ನೆಲೆಯಲ್ಲಿ, ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಜ. 9 ರಂದು ದಿಢೀರ್ ದಾಳಿ ನಡೆಸಿ ದಂಧೆಕೋರರಿಗೆ ಶಾಕ್ ನೀಡಿದೆ!
ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದಲ್ಲಿ ನಡೆದ ದಿಢೀರ್ ದಾಳಿಯ ವೇಳೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಭಾಗಿಯಾಗಿದ್ದರು.
ಅಧಿಕಾರಿಗಳ ತಂಡದ ದಾಳಿಯ ಮಾಹಿತಿ ಅರಿತ ಮರಳು ದಂಧೆಕೋರರು, ಸ್ಥಳದಿಂದ ವಾಹನ ಸಮೇತ ಪರಾರಿಯಾಗಿದ್ದಾರೆ. ಆದರೆ ನದಿಯಂಚಿನಲ್ಲಿ ದಾಸ್ತಾನು ಮಾಡಿದ್ದ ಭಾರೀ ಪ್ರಮಾಣದ ಮರಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.
ಲಭ್ಯ ಮಾಹಿತಿ ಅನುಸಾರ ಸರಿಸುಮಾರು 50 ಲಾರಿ ಲೋಡ್ ನಷ್ಟು ಮರಳು ದಾಸ್ತಾನು ಪತ್ತೆಯಾಗಿದ್ದು, ಇದರ ಮೌಲ್ಯ ಲಕ್ಷಾಂತರ ರೂಪಾಯಿಯಾಗಿದೆ ಎಂದು ತಿಳಿದುಬಂದಿದೆ. ಸದರಿ ಮರಳು ದಾಸ್ತಾನನ್ನು ತಾಲೂಕು ಆಡಳಿತವು, ಪಿಡಬ್ಲ್ಯೂಡಿ ಇಲಾಖೆ ವಶಕ್ಕೆ ಒಪ್ಪಿಸಿದೆ.
ಇತ್ತೀಚೆಗೆ ಹಾಡೋನಹಳ್ಳಿ ಸುತ್ತಮುತ್ತಲಿನ ತುಂಗಭದ್ರಾ ನದಿಯಂಚಿನಲ್ಲಿ ಭಾರೀ ಪ್ರಮಾಣದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ದೂರುಗಳಿದ್ದವು. ಸಾರ್ವಜನಿಕರ ದೂರುಗಳ ಆಧಾರದ ಮೇಲೆ ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ದಿಢೀರ್ ದಾಳಿಯಿಂದ ಹಾಡೋನಹಳ್ಳಿ ಸುತ್ತಮುತ್ತಲಿನ ತುಂಗಭದ್ರಾ ನದಿಯಂಚಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ತಾತ್ಕಾಲಿಕ ಬ್ರೇಕ್ ಬೀಳುವಂತಾಗಿದೆ.
Shimoga, January 9: In the wake of a complaint of massive illegal sand mining in the Tungabhadra river near Hadonahalli in Shimoga taluk, a team of officials led by the Tahsildar on January 9 gave a shock to the traffickers by conducting a surprise raid!
During the surprise raid led by Tahsildar VS Rajiv, officials of the Department of Mines and Geosciences and rural station police were involved.