
ಭದ್ರಾವತಿ : ಪತ್ನಿ ಮನೆ ಎದುರಲ್ಲಿಯೇ ಭೀಕರವಾಗಿ ಹತ್ಯೆಗೀಡಾದ ರೌಡಿ ಶೀಟರ್!
‘ಪ್ರಕರಣದ ತನಿಖೆ ಬಿರುಸು’ : ಶಿವಮೊಗ್ಗ ಎಸ್ಪಿ ಮಾಹಿತಿ
ಭದ್ರಾವತಿ, ಜು. 21: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ, ಭದ್ರಾವತಿ ಪಟ್ಟಣದ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ತಡರಾತ್ರಿ ನಡೆದಿದೆ.
ಮುಜ್ಜು ಅಲಿಯಾಸ್ ಮುಜಾಹೀದ್ (35) ಕೊಲೆಗೀಡಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಮುಜ್ಜು ಸ್ಥಳದಲ್ಲಿಯೇ ಅಸುನೀಗಿದ್ದಾನೆ.
‘ಕೊಲೆಗೀಡಾದ ಮುಜ್ಜು ಅಲಿಯಾಸ್ ಮುಜಾಹೀದ್ ರೌಡಿ ಶೀಟರ್ ಆಗಿದ್ದಾನೆ. ಈತನ ವಿರುದ್ದ ಐಪಿಸಿ ಕಲಂ 302 (ಕೊಲೆ), 307 (ಕೊಲೆ ಯತ್ನ) ಸೇರಿದಂತೆ ನಾಲ್ಕು ಕೇಸ್ ಗಳು ದಾಖಲಾಗಿದ್ದವು. ಎರಡನೇ ಪತ್ನಿಯ ಮನೆಯ ಬಳಿ ಈತನ ಕೊಲೆಗೀಡಾದ ಮೃತದೇಹ ಪತ್ತೆಯಾಗಿದೆ.
ಹರಿತವಾದ ಆಯುಧ ಬಳಸಲಾಗಿದ್ದು, ಮುಖ ಹಾಗೂ ಕೈ ಭಾಗದಲ್ಲಿ ತೀವ್ರ ಸ್ವರೂಪದ ಗಾಯವಾಗಿದೆ. ಹತ್ಯೆಗೆ ಕಾರಣವೇನು ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಶುಕ್ರವಾರ ಬೆಳಿಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಕಾರಣವೇನು? ಹಂತಕರು ಯಾರು? ಎಂಬಿತ್ಯಾದಿ ವಿವರಗಳು ಪೊಲೀಸರ ತನಿಖೆಯ ನಂತರವಷ್ಟೆ ತಿಳಿದುಬರಬೇಕಾಗಿದೆ.