ಶಿವಮೊಗ್ಗ, ಜ. 24: ಕೆಲಸಕ್ಕಿದ್ದ ಅಂಗಡಿಯಲ್ಲಿಯೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಕೊಲ್ಕತ್ತಾದಲ್ಲಿ ಬಂಧಿಸಿ ಕರೆತಂದಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ರಾಜ್ಯದ ಹೌರಾ ಜಿಲ್ಲೆಯ ಜೈಪೂರ್ ಥಾಣಾದ ಖಜಿರ್ದೊ ಗ್ರಾಮದ ನಿವಾಸಿಯಾದ ಅದಿತೋ ಮಾಜಿ ಯಾನೆ ಆದಿತ್ಯಾ (37) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ.
ಈತನಿಂದ 130 ಗ್ರಾಂ ತೂಕದ 8.45 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣವನ್ನು ಕೋಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳ್ಳತನ : ಆರೋಪಿಯು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಷ್ಕರ್ ಮೊಹಲ್ಲಾದ ವಾಸಿ ಅನಿಸೂರ್ ಇಸ್ಲಾಂ ಎಂಬುವರ ಅಂಗಡಿಯಲ್ಲಿ ಚಿನ್ನ-ಬೆಳ್ಳಿ ಆಭರಣ ತಯಾರಿಸುವ ಕಾರ್ಯ ನಿರ್ವಹಿಸುತ್ತಿದ್ದ. ಕಳೆದ ಜ. 4 ರಂದು ಅಂಗಡಿಯಲ್ಲಿದ್ದ ಬಂಗಾರವನ್ನು ಅಪಹರಿಸಿ ಪರಾರಿಯಾಗಿದ್ದ.
ಕೋಟೆ ಠಾಣೆ ಇನ್ಸ್’ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಕುಮಾರ್, ಸಿ.ಆರ್.ಕೊಪ್ಪದ್, ಎಎಸ್ಐ ಶ್ರೀಹರ್ಷ, ಸಿಬ್ಬಂದಿಗಳಾದ ಹೆಚ್.ಸಿ. ಅಣ್ಣಪ್ಪ, ನಾಗರಾಜ, ಪಿಸಿ ಅಂಜಿನಪ್ಪ, ಕಿಶೋರ, ಜಯಶ್ರೀರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

