ಶಿಕಾರಿಪುರ (shikaripur), ಸೆ. 5: ಮನೆಯಲ್ಲಿ ಆಟವಾಡುವ ವೇಳೆ, ಒಂದೂವರೆ ವರ್ಷದ ಮಗುವೊಂದು ಜ್ಯೂಸ್ ಬಾಟಲಿಯ ಮುಚ್ಚಳ ನುಂಗಿ ಉಸಿರಾಟದ ತೊಂದರೆಯಿಂದ ಮೃತಪಟ್ಟ ದಾರುಣ ಘಟನೆ, ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿ (shikaripur amatekoppa grama panchayat) ಯಲ್ಲಿ ನಡೆದಿದೆ.
ತಾಲೂಕಿನ ಹರಗುವಳ್ಳಿ ಗ್ರಾಮ (shikaripur taluk haraguvalli village) ದಲ್ಲಿ ಈ ಘಟನೆ ನಡೆದಿದೆ. ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಪುತ್ರ ನಂದೀಶ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.
Sep – 4 ರ ಬುಧವಾರ ಬೆಳಿಗ್ಗೆ ಮನೆಯಲ್ಲಿ ಜ್ಯೂಸ್ ಬಾಟಲಿ ಹಿಡಿದುಕೊಂಡು ಮಗು ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮುಚ್ಚಳ ನುಂಗಿದ್ದು (juice bottle cap), ಅದು ಗಂಟಲಲ್ಲಿ ಸಿಲುಕಿ ಬಿದ್ದಿದೆ. ಮುಗುವಿನ ಉಸಿರಾಟದಲ್ಲಿ ಏರುಪೇರಾಗಿದೆ.
ತಕ್ಷಣವೇ ಕುಟುಂಬದವರು ವಾಹನವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ಆಟವಾಡಿಕೊಂಡಿದ್ದ ಪುಟಾಣಿ ಕಂದಮ್ಮನ ದಿಢೀರ್ ಸಾವು, ಇಡೀ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.
ಗ್ರಾಮಸ್ಥರ ಶೋಕ : ಗ್ರಾಮದ ಮುಖಂಡ ರಂಗನಾಥ್ ಅವರು ಮಾತನಾಡಿ, ‘ಗ್ರಾಮದಲ್ಲಿ ಹಿಂದೆಂದೂ ಈ ರೀತಿಯ ಘಟನೆ ಸಂಭವಿಸಿರಲಿಲ್ಲ. ಮಗುವಿನ ಸಾವು ಗ್ರಾಮಸ್ಥರಲ್ಲಿ ಅತೀವ ನೋವುಂಟು ಮಾಡಿದೆ’ ಎಂದು ತಿಳಿಸಿದ್ದಾರೆ.

