ಶಿವಮೊಗ್ಗ (shivamogga), ನ. 6: ಜಮೀನಿನ ಪೌತಿ ಖಾತೆ ಮಾಡಿ ಕೊಡಲು ವ್ಯಕ್ತಿಯೋರ್ವರಿಂದ 25 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಗ್ರಾಮ ಆಡಳಿತ ಅಧಿಕಾರಿ (ವಿ.ಎ) ಯನ್ನು, ಲಂಚದ ಹಣದ ಸಮೇತ ಲೋಕಾಯುಕ್ತ ಪೊಲೀಸ್ ತಂಡ ಬಂಧಿಸಿದ ಘಟನೆ, ಶಿವಮೊಗ್ಗ ನಗರದಲ್ಲಿ ನ. 6 ರ ಸಂಜೆ ನಡೆದಿದೆ.
ಸಂಜಯ್ ಮೋಹಿತೆ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತ ಅಧಿಕಾರಿ ಎಂದು ಗುರುತಿಸಲಾಗಿದೆ. ಹಳೇ ಜೈಲು ಆವರಣದಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯಲ್ಲಿ, ಲಂಚ ಪಡೆಯುವ ವೇಳೆ ಅವರನ್ನು ಬಂಧಿಸಲಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌಧರಿ ಎಂ ಹೆಚ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಲೋಕಾಯುಕ್ತ ಇನ್ಸ್’ಪೆಕ್ಟರ್ ವೀರಬಸಪ್ಪ ಎಲ್ ಕುಸಲಾಪುರ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ : ಶಿವಮೊಗ್ಗ ತಾಲೂಕಿನ ಅಗಸವಳ್ಳಿ ಹೊಸೂರಿನ ನಿವಾಸಿ ಮುನಿರಂಗೇಗೌಡ ಯಾನೆ ಕಿರಣ (25) ಎಂಬ ಯುವಕ ದೂರುದಾರರಾಗಿದ್ದಾರೆ. ಇವರ ಅಜ್ಜ ವಿಧಿವಶರಾಗಿದ್ದು, ಅವರ ಹೆಸರಿನಲ್ಲಿದ್ದ 2 ಎಕರೆ ಜಮೀನನ್ನು ಅಜ್ಜಿಯ ಹೆಸರಿಗೆ ಪೌತಿ ಖಾತೆ ಮಾಡಿಕೊಡುವಂತೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಪೌತಿ ಖಾತೆ ಮಾಡಿಕೊಡಲು 25 ಸಾವಿರ ರೂ. ಲಂಚ ನೀಡುವಂತೆ ಗ್ರಾಮ ಆಡಳಿತಾಧಿಕಾರಿ ಸಂಜಯ್ ಮೋಹಿತ್ ಅವರು ಡಿಮ್ಯಾಂಡ್ ಮಾಡಿದ್ದರು. ಈ ಸಂಬಂಧ ದೂರುದಾರರು ನ. 6 ರಂದು ಲೋಕಾಯುಕ್ತ ಪೊಲೀಸರಿಗೆ ದೂರು ದಾಖಲಿಸಿದ್ದರು.

