bhadravati crime news | ಭದ್ರಾವತಿ : ಬಸ್ ನಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿದ್ದ ಮಹಿಳೆ ಅರೆಸ್ಟ್!
ಶಿವಮೊಗ್ಗ (shivamogga), ನ. 6: ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್ ನಿಂದ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ರೇಷ್ಮೆ ಸೀರೆ ಅಪಹರಿಸಿದ್ದ ಮಹಿಳೆಯನ್ನು ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಭದ್ರಾವತಿ ನಗರದ ಸೀಗೆಬಾಗಿ ಬಡಾವಣೆ ನಿವಾಸಿ ಕಮಲಮ್ಮ (48) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸದರಿ ಮಹಿಳೆಯು ಶಿವಮೊಗ್ಗದ ಕಾಲೇಜ್ ವೊಂದರಲ್ಲಿ, ಹೊರಗುತ್ತಿಗೆ ಆಧಾರದ ಮೇಲೆ ಅಟೆಂಡರ್ ಕೆಲಸ ಮಾಡುತ್ತಿದ್ದರು.
ಬಂಧಿತ ಮಹಿಳೆಯಿಂದ ಕಳವು ಮಾಡಿದ್ದ 276. 75 ಗ್ರಾಂ ತೂಕದ, 20. 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 16 ಸಾವಿರ ರೂ. ಮೌಲ್ಯದ 2 ರೇಷ್ಮೆ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿವೈಎಸ್ಪಿ ನಾಗರಾಜ್ ಅವರ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಶ್ರೀಶೈಲಕುಮಾರ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಟಿ. ರಮೇಶ್, ಎಎಸ್ಐ ಮಂಜಪ್ಪ ಮತ್ತವರ ಸಿಬ್ಬಂದಿಗಳಾದ ಸಿಹೆಚ್’ಸಿ ನವೀನ್, ಹಾಲಪ್ಪ, ಮಧು ಪ್ರಸಾದ್, ಸಿಪಿಸಿ ಮೌನೇಶ್, ಪ್ರಸನ್ನ, ದಿವ್ಯಶ್ರೀ ಅವರು ಆಪಾದಿತೆಯನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ.
ಪ್ರಕರಣದ ಹಿನ್ನೆಲೆ : ಶಿವಮೊಗ್ಗದ ಕಾಶೀಪುರ ಬಡಾವಣೆ ನಿವಾಸಿ ಪ್ರಭಾವತಿ ಎಂಬುವರು, ನ. 1 ರಂದು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಸರ್ಕಾರಿ ಬಸ್ ನಲ್ಲಿ ಆಗಮಿಸಿದ್ದರು.
ಬಸ್ ನಿಲ್ದಾಣದಲ್ಲಿ ಇಳಿದಾಗ 287 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ ಎರಡು ರೇಷ್ಮೆ ಸೀರೆಗಳಿದ್ದ ಕಿಟ್ ಬ್ಯಾಗ್ ನ್ನು ಕಳುವಾಗಿದ್ದು ಗೊತ್ತಾಗಿದೆ. ಈ ಸಂಬಂಧ ಅವರು ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮೆಚ್ಚುಗೆ : ಶಿವಮೊಗ್ಗ ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಅವರು, ಪ್ರಕರಣ ಪತ್ತೆ ಹಚ್ಚುವಲ್ಲಿ ಸಫಲರಾದ ನ್ಯೂ ಟೌನ್ ಠಾಣೆ ಪೊಲೀಸರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
The Bhadravati New Town police station has succeeded in arresting a woman who had stolen gold jewelery and a silk saree worth lakhs of rupees from the bag of a woman who was traveling in a KSRTC bus.
