ಶಿವಮೊಗ್ಗ (shivamogga), ಡಿ. 10: ಶಿವಮೊಗ್ಗ ನಗರದ ಚನ್ನಪ್ಪ ಲೇಔಟ್ 2 ನೇ ತಿರುವಿನಲ್ಲಿ, ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಕಾಮಗಾರಿಗೆ ತೆಗೆದ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಡಲಾಗಿದೆ. ಇದರಿಂದ ಸಾಕಷ್ಟು ತೊಂದರೆ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ನೀರಿನ ಸಂಪರ್ಕ ಮತ್ತೀತರ ಕಾರಣಗಳಿಂದ ಗುಂಡಿಗಳನ್ನು ತೆಗೆಯಲಾಗಿತ್ತು. ಆದರೆ ತಿಂಗಳು ಕಳೆದರೂ ಗುಂಡಿಗಳನ್ನು ಮುಚ್ಚಿಲ್ಲ. ಈಗಾಗಲೇ ಜಲ ಮಂಡಳಿ, ಪಾಲಿಕೆ ಆಡಳಿತದ ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಸ್ತೆ ಪಕ್ಕದಲ್ಲಿ ತೆಗೆದು ಬಿಟ್ಟಿರುವ ಗುಂಡಿಗಳಲ್ಲಿ, ಕೊಳಚೆ ನೀರು ತುಂಬಿಕೊಂಡು ದುರ್ನಾತ ಬೀರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡುವ ದುಃಸ್ಥಿತಿಯಿದೆ. ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಅಪಾಯಕಾರಿಯಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಚನ್ನಪ್ಪ ಲೇಔಟ್ ನ ಇತರೆ ಕ್ರಾಸ್ ಗಳಲ್ಲಿಯೂ ಇದೇ ಸ್ಥಿತಿಯಿದೆ. ತಕ್ಷಣವೇ ಜಲ ಮಂಡಳಿ ಆಡಳಿತ ಎಚ್ಚೆತ್ತುಕೊಳ್ಳಬೇಕು. ರಸ್ತೆ ಪಕ್ಕದಲ್ಲಿ ತೆಗೆದು ಬಿಟ್ಟಿರುವ ಗುಂಡಿ – ಗೊಟರು ಮುಚ್ಚಲು ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

