
bhadra dam | ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಹೆಚ್ಚುತ್ತಿರುವ ಒತ್ತಡ : ಜ. 4 ರಂದು ನಡೆಯಲಿದೆ ಮಹತ್ವದ ಸಭೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜ. 3: ಬೇಸಿಗೆ ಬೆಳೆ ಬೆಳೆಯಲು ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಬೇಕೆಂಬ ಆಗ್ರಹ, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಂದ ಕೇಳಿಬರಲಾರಂಭಿಸಿದೆ. ಈಗಾಗಲೇ ಈ ನಿಟ್ಟಿನಲ್ಲಿ ರೈತರು ಪ್ರತಿಭಟನೆ ಕೂಡ ನಡೆಸಿದ್ದಾರೆ.
ಈ ನಡುವೆ ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ 2024-25 ನೇ ಸಾಲಿನ ಬೇಸಿಗೆ ಬೆಳೆಗೆ, ನೀರು ಹರಿಸಲು ದಿನಾಂಕ ನಿರ್ಧರಿಸುವ ಕುರಿತಂತೆ ಜ. 4 ರಂದು ಸಂಜೆ 5 ಗಂಟೆಗೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ಆಯೋಜಿಸಲಾಗಿದೆ.
ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಲಹಾ ಸಮಿತಿ ಸಭೆಯು, ಅಂತರ್ಜಾಲ ಆಧಾರಿತ ಜೂಮ್ ಮೀಟ್ ಮೂಲಕ ಆಯೋಜಿಸಲಾಗುತ್ತಿದೆ.
ಸಲಹಾ ಸಮಿತಿ ಸದಸ್ಯರುಗಳಿಗೆ ಜೂಮ್ ಮೀಟ್ ನ ಲಿಂಕ್ ನ್ನು ಕಳುಹಿಸಿ ಕೊಡಲಾಗಿದ್ದು, ನಿಗದಿತ ಸಮಯಕ್ಕೆ ಸದರಿ ಲಿಂಕ್ ಮೂಲಕ ಜೂಮ್ ಮೀಟ್ ನ ಸಭೆಯಲ್ಲಿ ಭಾಗಿಯಾಗುವಂತೆ ಕೋರಲಾಗಿದೆ.
ಡ್ಯಾಂ ಭರ್ತಿ : ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮುಂಗಾರು ಮಳೆಯಾದ ಕಾರಣದಿಂದ, ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಎಂದೇ ಕರೆಯಲಾಗುವ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಿತ್ತು. ಈಗಾಗಲೇ ಮುಂಗಾರು ಹಂಗಾಮಿನ ಬೆಳೆಗೆ ಜಲಾಶಯದಿಂದ ನೀರು ಹರಿಸಲಾಗಿತ್ತು. ನಂತರ ಸ್ಥಗಿತಗೊಳಿಸಲಾಗಿತ್ತು.
ಕಳೆದ ಹಲವು ದಿನಗಳಿಂದ ಮಳೆ ಕಣ್ಮರೆಯಾಗಿದೆ. ಮತ್ತೊಂದೆಡೆ, ಬಿಸಿಲ ಬೇಗೆ ಆರಂಭವಾಗಿದೆ. ಇದೀಗ ಬೇಸಿಗೆ ಹಂಗಾಮಿನ ಬೆಳೆಗೆ ರೈತರು ಸಿದ್ದತೆ ನಡೆಸುತ್ತಿದ್ದಾರೆ. ಈ ಕಾರಣದಿಂದ ಭದ್ರಾ ಎಡ ಹಾಗೂ ಬಲ ನಾಲೆಗೆ ನೀರು ಹರಿಸಬೇಕೆಂಬ ಆಗ್ರಹ ನಾಲಾ ವ್ಯಾಪ್ತಿಯ ರೈತರದ್ದಾಗಿತ್ತು.
ಇತ್ತೀಚೆಗೆ ಬಲದಂಡೆ ನಾಲೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಶಿವಮೊಗ್ಗದ ಮಲವಗೊಪ್ಪದಲ್ಲಿರುವ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಜಲಾಶಯದಿಂದ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿದ್ದರು. ಮತ್ತೊಂದೆಡೆ, ದಾವಣಗೆರೆ ಜಿಲ್ಲೆ ಭಾಗದ ರೈತರು ಕೂಡ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿದ್ದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಂಶುಮಂತ್ ಹೇಳಿದ್ದೇನು?
‘ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವ ಕುರಿತಂತೆ ನಿರ್ಧಾರ ಕೈಗೊಳ್ಳಲು, ಜ. 4 ರಂದು ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ, ಜೂಮ್ ಮೀಟಿಂಗ್ ನಲ್ಲಿ ಸಭೆ ನಡೆಯಲಿದೆ’ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಅಂಶುಮಂತ್ ( Amshumanth ) ಅವರು ತಿಳಿಸಿದ್ದಾರೆ.
ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಸ್ತುತ ಜಲಾಶಯದಲ್ಲಿ 182 ಅಡಿಯಷ್ಟು ನೀರು ಸಂಗ್ರಹವಾಗಿದೆ. ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅಧ್ಯಕ್ಷ ಡಾ.ಅಂಶುಮಂತ್ ಅವರು ಹೇಳಿದ್ದಾರೆ.
ಮೇ ತಿಂಗಳವರೆಗೆ ನೀರು ಹರಿಸಲು ರೈತ ಸಂಘದ ಜಿಲ್ಲಾಧ್ಯಕ್ಷರ ಆಗ್ರಹ
‘ಬೇಸಿಗೆ ಹಂಗಾಮಿನ ಬೆಳೆ ಬೆಳೆಯಲು ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ಇತ್ತೀಚೆಗೆ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಜನವರಿ 1 ರಿಂದ ನೀರು ಹರಿಸುವ ಭರವಸೆ ನೀಡಲಾಗಿತ್ತು. ಈ ನಡುವೆ ನಾಲೆಗಳಿಗೆ ನೀರು ಹರಿಸುವ ಸಂಬಂಧ, ಜ. 4 ರಂದು ನೀರಾವರಿ ಸಲಹಾ ಸಮಿತಿ ಸಭೆ ಆಹ್ವಾನಿಸಲಾಗಿದೆ. ಸದರಿ ಸಭೆಯಲ್ಲಿ ತತ್’ಕ್ಷಣದಿಂದಲೇ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ ರಾಘವೇಂದ್ರ ಅವರು ಆಗ್ರಹಿಸಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, ಮೇ ತಿಂಗಳವರೆಗೆ ನಾಲೆಗಳಿಗೆ ನಿರಂತರವಾಗಿ ನೀರು ಹರಿಸಬೇಕು. ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು. ರೈತರಿಗೆ ಅನಾನುಕೂಲವಾಗದಂತೆ ಎಚ್ಚರವಹಿಸಬೇಕು. ಹಾಗೆಯೇ ನಾಲೆಯ ಕೊನೆಯ ಹಂತದವರೆಗೆ ನೀರು ತಲುಪುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನಾಲೆಗಳಿಗೆ ನೀರು ಹರಿಸದ ಕಾರಣದಿಂದ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಂಕಷ್ಟ ಪಡುವಂತಾಗಿದೆ. ಮಳೆ ಕಣ್ಮರೆಯಾಗಿರುವುದು ಹಾಗೂ ಬೇಸಿಗೆ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಬೆಳೆಗಳು ಒಣಗಲಾರಂಭಿಸಿವೆ ಎಂದು ಕೆ ರಾಘವೇಂದ್ರ ಅವರು ತಿಳಿಸಿದ್ದಾರೆ.
Shimoga, January 3: Farmers of the Achukattu area have started hearing the demand to release water from the Bhadra reservoir to the canals for growing summer crops. Farmers have already protested in this regard.
Meanwhile, a meeting of the Bhadra Yojana Irrigation Advisory Committee has been organized on January 4 at 5 pm to decide the date for irrigation for the summer crop of 2024-25 in the Bhadra Yojana area.
District In-charge Minister Madhu Bangarappa, who is also the Chairman of the Irrigation Advisory Committee, is on a foreign tour. Against this backdrop, the advisory committee meeting is being organized through internet based zoom meet.