shimoga | ಶಿವಮೊಗ್ಗ : ಹಂದಿ ಸಾಕಾಣಿಕೆ ಮಾಲೀಕರಿಗೆ ಪಾಲಿಕೆ ಆಡಳಿತದ ಡೆಡ್’ಲೈನ್!
ಶಿವಮೊಗ್ಗ (shivamogga), ಏ. 3: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿಗಳನ್ನು 3 ದಿನದೊಳಗೆ ತೆರವುಗೊಳಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು, ಹಂದಿಗಳ ಸಾಕಾಣಿಕೆದಾರರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಏ. 3 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿಗಳು ಹೆಚ್ಚಾಗಿದೆ. ಅನೈರ್ಮಲ್ಯತೆ, ಪರಿಸರ ಮಾಲಿನ್ಯ, ಹಂದಿ ಜ್ವರ ಮತ್ತು ಮೆದುಳು ಜ್ವರದಂತಹ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಇತ್ತೀಚೆಗೆ ಉಪ ಲೋಕಾಯುಕ್ತರು ನಗರಕ್ಕೆ ಭೇಟಿ ನೀಡಿದ್ದ ವೇಳೆ ಸಾರ್ವಜನಿಕರು ದೂರು ನೀಡಿರುತ್ತಾರೆ.
ಹಂದಿ ಸಾಕಾಣಿಕೆ ಮಾಡಬಾರದೆಂದು ನಿರ್ದೇಶಿಸಿ ಪಾಲಿಕೆಯು ಈ ಹಿಂದೆ ಅನೇಕ ಬಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹಂದಿ ಮಾಲೀಕರು ಯಾವುದೇ ರೀತಿಯ ಕ್ರಮವಹಿಸಿರುವುದಿಲ್ಲ. ಪಾಲಿಕೆ ಆಯುಕ್ತರ ಅನುಮತಿ ಇಲ್ಲದೆ ಹಂದಿಗಳನ್ನು ಸಾಕುತ್ತಿರುವುದು ಕರ್ನಾಟಕ ಪೌರಸಂಸ್ಥೆ ನಿಯಮದ ಅಧಿನಿಯಮ 1976 ಕಲಂ 344 ಮತ್ತು 345 ರನ್ವಯ ಕಾನೂನು ಬಾಹಿರವಾಗಿದೆ.
ನಗರ ವ್ಯಾಪ್ತಿಯಲ್ಲಿ ಹಂದಿಗಳನ್ನು ಸಾಕಿದ್ದಲ್ಲಿ ತಮ್ಮ ಎಲ್ಲಾ ಹಂದಿಗಳನ್ನು 3 ದಿನಗಳೊಳಗೆ ಖಾಲಿ ಮಾಡಬೇಕು. ತಪ್ಪಿದ್ದಲ್ಲಿ ನಗರ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಬೀಡಾಡಿ ಹಂದಿಗಳೆಂದು ಪರಿಗಣಿಸಿ ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಆಗುವ ಯಾವುದೇ ನಷ್ಟಕ್ಕೆ ಪಾಲಿಕೆ ಜವಾಬ್ದಾರರಲ್ಲ ಎಂದು ಪಾಲಿಕೆ ಆಯುಕ್ತರು ಹಂದಿ ಸಾಕಾಣಿಕೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
