ಶಿವಮೊಗ್ಗ (shivamogga), ಜೂನ್ 12: ಶಿವಮೊಗ್ಗ ನಗರದ ಗಾಂಧಿ ಬಜಾರ್ ನ 1 ನೇ ತಿರುವಿನ ಲಷ್ಕರ್ ಮೊಹಲ್ಲಾ ಸಮೀಪ ಇಸ್ಪೀಟ್ ಜೂಜು ಅಡ್ಡೆಯೊಂದರಲ್ಲಿ, ಹಾಡಹಗಲೇ ರೌಡಿ ಶೀಟರ್ ಓರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಜೂನ್ 12 ರ ಮಧ್ಯಾಹ್ನ ನಡೆದಿದೆ.
ಗೋವಿಂದಪುರ ಆಶ್ರಯ ಬಡಾವಣೆ ನಿವಾಸಿ ನರಸಿಂಹ (39) ಕೊಲೆಗೀಡಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ವಾಹನವೊಂದರಲ್ಲಿ ಆಗಮಿಸಿದ ನಾಲ್ಕೈದು ಜನರಿದ್ದ ದುಷ್ಕರ್ಮಿಗಳ ತಂಡ ಕೃತ್ಯ ನಡೆಸಿದೆ ಎಂದು ತಿಳಿದುಬಂದಿದೆ.
ಸದರಿ ಪ್ರದೇಶದ ಮನೆಯೊಂದರಲ್ಲಿ, ಅನದಿಕೃತವಾಗಿ ಅಂದರ್ – ಬಾಹರ್ ಇಸ್ಪೀಟ್ ಜೂಜಾಟ ನಡೆಸಲಾಗುತ್ತಿತ್ತು. ಮನೆಗೆ ನುಗ್ಗಿದ ದುಷ್ಕರ್ಮಿಗಳು ನರಸಿಂಹನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮತ್ತೊಂದು ರೌಡಿ ತಂಡ ಈ ಕೃತ್ಯ ನಡೆಸಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

