ವರದಿ : ಬಿ ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 10: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆಯ ತಡೆಗೋಡೆ ಕುಸಿದು ಅಪಾಯಕಾರಿ ಸ್ಥಿತಿ ಉಂಟಾಗಿ ವರ್ಷಗಳೇ ಉರುಳಿದರೂ, ಇಲ್ಲಿಯವರೆಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯವಹಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ!
ಗಾಡಿಕೊಪ್ಪದ ಶರಾವತಿ ಡೆಂಟಲ್ ಕಾಲೇಜ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುಃಸ್ಥಿತಿಯಿದೆ. ತುಂಗಾ ಮೇಲ್ದಂಡೆ ನಾಲೆಗೆ ನಿರ್ಮಿಸಿರುವ ಸೇತುವೆಯ ಒಂದು ಬದಿಯ ತಡೆಗೋಡೆ, ಬರೋಬ್ಬರಿ ಸರಿಸುಮಾರು ಒಂದೂವರೆ ವರ್ಷಗಳ ಹಿಂದೆ ಕುಸಿತವಾಗಿತ್ತು.
ಪ್ರಸ್ತುತ ಕೂಡ ಸದರಿ ಪ್ರದೇಶದಲ್ಲಿ ನಿರಂತರವಾಗಿ ಭೂ ಕುಸಿತವಾಗುತ್ತಿದೆ. ಈಗಾಗಲೇ ಹೆದ್ದಾರಿ ಸಮೀಪಕ್ಕೆ ಭೂ ಕುಸಿತ ತಲುಪಿದೆ. ಸಮೀಪದ ವಿದ್ಯುತ್ ಟ್ರಾನ್ಸ್’ಫಾರ್ಮಾರ್ ಕಂಬಗಳ ಬಳಿಯೂ ಮಣ್ಣು ಕುಸಿದಿದೆ.
ಭಾರೀ ಪ್ರಮಾಣದ ಮಳೆಯಾದರೆ ಟ್ರಾನ್ಸ್’ಫಾರ್ಮಾರ್ ಗಳು ಕೂಡ ನಾಲೆಗೆ ಬೀಳುವುದು ನಿಶ್ಚಿತವಾಗಿದೆ. ಇಷ್ಟೆಲ್ಲ ಅಪಾಯಕಾರಿ ಸ್ಥಿತಿಯಿದ್ದರೂ ಇಲ್ಲಿಯವರೆಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಜಾಣ ಮೌನಕ್ಕೆ ಶರಣಾಗಿದ್ಧಾರೆ. ಅವ್ಯವಸ್ಥೆ ಸರಿಪಡಿಸಲು ಯಾವುದೇ ಕ್ರಮಕೈಗೊಂಡಿಲ್ಲವೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮತ್ತೊಂದೆಡೆ ತುಂಗಾ ಮೇಲ್ದಡೆ ನಾಲೆಯ ಅಧಿಕಾರಿಗಳು ಕೂಡ ಇತ್ತ ಚಿತ್ತ ಹರಿಸುವ ಗೋಜಿಗೆ ಹೋಗುತ್ತಿಲ್ಲ. ಎರಡೂ ಇಲಾಖೆಯ ಅಧಿಕಾರಿಗಳು, ಏನಾದರೂ ಅನಾಹುತ ಸಂಭವಿಸಲಿ ಎಂದು ಕಾದು ಕುಳಿತುಕೊಂಡಂತಿದೆ ಎಂದು ಸ್ಥಳೀಯ ನಾಗರಿಕರು ದೂರುತ್ತಾರೆ.
ವಾಹನ ದಟ್ಟಣೆ : ಸದರಿ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅತೀ ಹೆಚ್ಚು ದಟ್ಟಣೆಯಿರುವ ರಸ್ತೆಯಾಗಿದೆ. ಇದರ ಹೊರತಾಗಿಯೂ ಸೇತುವೆಯ ತಡೆಗೋಡೆ ದುರಸ್ತಿಗೆ ಕ್ರಮಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯವಹಿಸಿರುವುದು ಸಖೇದಾಶ್ಚರ್ಯ ಸಂಗತಿಯಾಗಿದೆ ಎಂದು ನಾಗರಿಕರು ಅಚ್ಚರಿ ವ್ಯಕ್ತಪಡಿಸುತ್ತಾರೆ.
ತಡೆಗೋಡೆ ಕುಸಿದ ಸ್ಥಳದಲ್ಲಿ ತುಂಗಾ ನಾಲೆಯ ಕಾಂಕ್ರಿಟ್ ಲೈನಿಂಗ್ ಕೂಡ ಹಾಳಾಗಿದೆ. ಕಿರು ಅರಣ್ಯದ ರೀತಿಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿತವಾಗಿದೆ. ನಾಲೆಗೆ ನೇರವಾಗಿ ಕೊಳಚೆ ನೀರು ಹರಿಯುತ್ತಿದೆ.
ಆದರೆ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಕೂಡ ಇತ್ತ ಗಮನಹರಿಸಿಲ್ಲ. ಇದರ ದುರಸ್ತಿಗೆ ಕ್ರಮಕೈಗೊಂಡಿಲ್ಲ.ಇದರಿಂದ ಸದರಿ ಸ್ಥಳದಲ್ಲಿ ಅವ್ಯವಸ್ಥೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವಂತಾಗಿದೆ ಎಂದು ನಾಗರೀಕರು ದೂರುತ್ತಾರೆ.
ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ತುಂಗಾ ಮೇಲ್ದಂಡೆ ನಾಲೆಯ ಅಧಿಕಾರಿಗಳು ಇತ್ತ ಎಚ್ಚೆತ್ತುಕೊಳ್ಳಬೇಕಾಗಿದೆ. ಕಾಲಮಿತಿಯೊಳಗೆ ಸೇತುವೆಯ ತಡೆಗೋಡೆ ಹಾಗೂ ನಾಲೆಯ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಹೆದ್ದಾರಿಯಲ್ಲಿ ಗುಂಡಿ ಗಂಡಾಂತರ..!
*** ಗಾಡಿಕೊಪ್ಪದ ನಂಜಪ್ಪ ಲೈಪ್ ಕೇರ್ ಆಸ್ಪತ್ರೆ ಬದಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭಾರೀ ಪ್ರಮಾಣದ ಗುಂಡಿ – ಗೊಟರುಗಳು ಬಿದ್ದಿವೆ. ಈಗಾಗಲೇ ಗುಂಡಿ – ಗೊಟರುಗಳ ಕಾರಣದಿಂದಲೇ ಕೆಲ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದಾಗ್ಯೂ ಹೆದ್ದಾರಿಯ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಂಡಿಲ್ಲವೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
Shimoga: What is this divine negligence by National Highway officials?
Shimoga, September 10: In the Shimoga city limits – on the National Highway where thousands of vehicles travel daily, one side of the bridge’s retaining wall collapsed years ago creating a dangerous situation. Yet, till now, the concerned department officials have taken no action showing sheer negligence — sparking public outrage! This poor condition exists near Sharavathi Dental College at Gadikoppa, on the National Highway. The retaining wall on one side of the bridge built across the Tunga upper canal has collapsed.

