ಶಿವಮೊಗ್ಗ, ಜು. 24: ಕಚೇರಿಯಲ್ಲಿಯೇ ವ್ಯಕ್ತಿಯೋರ್ವರಿಂದ 1.50 ಲಕ್ಷ ರೂ. ಲಂಚ ಪಡೆಯುತ್ತಿದ್ದ ಅಧಿಕಾರಿಯೋರ್ವರನ್ನು, ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಶಿವಮೊಗ್ಗ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆದಿದೆ.
ತಹಶೀಲ್ದಾರ್ ಕಚೇರಿಯಲ್ಲಿ ಹಕ್ಕು ದಾಖಲೆ ವಿಭಾಗದ ಶಿರಸ್ತೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅರುಣ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ. ಇವರು ಕಂದಾಯ ನೌಕರರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಪ್ರಕರಣದ ಹಿನ್ನಲೆ: ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುವ, ಹನುಮಂತ ಆರ್ ಬನ್ನಿಕೋಡ್ ಎಂಬುವರು ಮನೆಯ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆಗೆ ಅರುಣ್ ಕುಮಾರ್ ಅವರು 3 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರು. ಈ ಸಂಬಂಧ ಸದರಿ ವ್ಯಕ್ತಿಯು ಲೋಕಾಯುಕ್ತರ ಗಮನಕ್ಕೆ ತಂದಿದ್ದರು.
ಸೋಮವಾರ ತಹಶೀಲ್ದಾರ್ ಕಚೇರಿಯ ತಮ್ಮ ಕೊಠಡಿಯಲ್ಲಿ ಅರುಣ್ ಕುಮಾರ್ ಅವರು, ಹುಮಂತ ಆರ್ ಬನ್ನಿಕೋಡ್ ಅವರಿಂದ ಮುಂಗಡವಾಗಿ 1.5 ಲಕ್ಷ ರೂ.ಗಳನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಅರುಣ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವ್, ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ಇನ್ಸ್’ಪೆಕ್ಟರ್ ಗಳಾದ ಶಿಲ್ಪಾ, ರಾಧಾಕೃಷ್ಣ ಸೇರಿದಂತೆ ಮೊದಲಾದವರಿದ್ದರು.

