ಶಿವಮೊಗ್ಗದ ಮೊದಲ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣ – ವಾಹನಗಳ ಸಂಚಾರಕ್ಕೆ ಮುಕ್ತ!
-ಬಿ. ರೇಣುಕೇಶ್-
ಶಿವಮೊಗ್ಗ, ಆ. 15: ಶಿವಮೊಗ್ಗ ನಗರದ ವೀರಣ್ಣನ ಲೇಔಟ್ ಬಳಿ, ರೈಲ್ವೆ ಇಲಾಖೆ ನಿರ್ಮಿಸುತ್ತಿದ್ದ ಅಂಡರ್ ಪಾಸ್ (ಕೆಳ ಸೇತುವೆ) ಕಾಮಗಾರಿ ಪೂರ್ಣಗೊಂಡಿದೆ. ವಾಹನಗಳ ಸಂಚಾರ ಕೂಡ ಆರಂಭವಾಗಿದೆ.

ಸದ್ಯ ಅಂಡರ್ ಪಾಸ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕನಕ ನಗರ, ಸೂರ್ಯ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳಿಗೆ ಸಾಕಷ್ಟು ಅನುಕೂಲವಾಗಿದೆ.

ಈ ಮೊದಲು ಸದರಿ ಸ್ಥಳದಲ್ಲಿ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಇತ್ತು. ಅಪಘಾತಗಳ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಇದನ್ನು ಮುಚ್ಚಿತ್ತು. ಇದರಿಂದ ಸುತ್ತಿ ಬಳಸಿ ನಾಗರೀಕರು ಸಂಚರಿಸುವಂತಾಗಿತ್ತು.

ಈ ಹಿನ್ನೆಲೆಯಲ್ಲಿ ಸದರಿ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸಬೇಕೆಂದು ಸ್ಥಳಿಯ ನಿವಾಸಿಗಳು ರೈಲ್ವೆ ಇಲಾಖೆಗೆ ಆಗ್ರಹಿಸಿದ್ದರು. ಈ ಸಂಬಂಧ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಪತ್ರ ಅರ್ಪಿಸಿದ್ದರು. ಇದೆಲ್ಲದರ ಫಲವಾಗಿ ರೈಲ್ವೆ ಇಲಾಖೆಯು ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮಕೈಗೊಂಡಿತ್ತು.

ಪ್ರಾರಂಭದಲ್ಲಿ ಶರವೇಗದಲ್ಲಿ ನಡೆದ ಕಾಮಗಾರಿಯೂ ನಂತರ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಆಮೆ ವೇಗದಲ್ಲಿ ನಡೆಯಲಾರಂಭಿಸಿತ್ತು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸದರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಕಳೆದ ಕೆಲ ತಿಂಗಳುಗಳಿಂದ ವೇಗ ಪಡೆದುಕೊಂಡಿದ್ದ ಕಾಮಗಾರಿಯೂ ಇದೀಗ ಪೂರ್ಣಗೊಂಡಿದೆ. ವಾಹನಗಳ ಸಂಚಾರ ಆರಂಭಗೊಂಡಿದ್ದು, ಇದು ಸ್ಥಳೀಯ ನಾಗರೀಕರ ಸಂತಸಕ್ಕೆ ಕಾರಣವಾಗಿದೆ.
