ಶಿವಮೊಗ್ಗ, ಆ. 16: ದೊಡ್ಡವನಾದ ಮೇಲೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಅದಮ್ಯ ಆಸೆ ಹೊಂದಿದ್ದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 8 ವರ್ಷದ ಬಾಲಕನ ಕೋರಿಕೆಯನ್ನು, ಶಿವಮೊಗ್ಗ ಪೊಲೀಸ್ ಇಲಾಖೆ ಈಡೇರಿಸಿದೆ..!

ಪುಟಾಣಿಯ ಆಸೆಯಂತೆ ಆತನನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಪೊಲೀಸ್ ಅಧಿಕಾರಿಯಾಗುವ ಅವಕಾಶ ಕಲ್ಪಿಸಿದೆ. ಈ ಮೂಲಕ ಬಾಲಕನ ಬದುಕಿಗೆ ಹೊಸ ಚೈತನ್ಯ ತುಂಬುವ ಹೃದಯ ಸ್ಪರ್ಶಿ ಕಾರ್ಯ ನಡೆಸಿದೆ.

ಹೌದು. ಮೂಲತಃ ಶಿವಮೊಗ್ಗದವರಾದ ಪ್ರಸ್ತುತ ಬಾಳೆಹೊನ್ನೂರಿನಲ್ಲಿ ನೆಲೆಸಿರುವ ತಬ್ರೇಜ್ ಖಾನ್ ಎಂಬುವರ ಪುತ್ರ ಆಜಾನ್ ಖಾನ್ ಪೊಲೀಸ್ ಅಧಿಕಾರಿಯಾಗಿ ಕಾರ್ಯಾಭಾರ ನಿರ್ವಹಿಸಿದ ಪುಟಾಣಿಯಾಗಿದ್ದಾನೆ.

ಬುಧವಾರ ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಪೊಲೀಸ್ ಅಧಿಕಾರಿ ಬಟ್ಟೆ ತೊಟ್ಟು ಆಗಮಿಸಿದ ಬಾಲಕನನ್ನು ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಠಾಣೆ ಮುಂಭಾಗ ಆತ್ಮೀಯ ಸ್ವಾಗತ ನೀಡಿದರು.

ಠಾಣೆಯ ಇನ್ಸ್’ಪೆಕ್ಟರ್ ಕುರ್ಚಿಯಲ್ಲಿ ಕುಳಿತ ಆಜಾನ್ ಖಾನ್ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳಿಗೆ ಕೆಲಸ ಕಾರ್ಯಗಳ ಕುರಿತಂತೆ ಸಲಹೆ ಸೂಚನೆ ನೀಡಿದ. ಪೊಲೀಸ್ ಅಧಿಕಾರಿಯಾಗುವ ತನ್ನ ಆಸೆ ಈಡೇರಿದ್ದಕ್ಕೆ ಬಾಲಕ ಸಂತಸಗೊಂಡಿದ್ದ. ನಗುನಗುತ್ತಲೆ ತನ್ನ ಸಂತಸ ಹಂಚಿಕೊಂಡ.

