ಶಿವಮೊಗ್ಗ, ಅ.15: ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟೇಶ ನಗರ ಸಮೀಪದ ತುಂಗಾ ನಾಲೆಯಲ್ಲಿ ಭಾನುವಾರ ಸಂಜೆ ಅನಾಮಧೇಯ ಪುರುಷನೋರ್ವನ ಶವ ಪತ್ತೆಯಾದ ಘಟನೆ ನಡೆದಿದೆ.
ನಾಲೆಯಲ್ಲಿ ಶವ ತೇಲಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಲಕ್ಷ್ಮಿ ಚಿತ್ರಮಂದಿರ ಸಮೀಪ ಗಸ್ತಿನಲ್ಲಿದ್ದ ವಿನೋಬನಗರ ಠಾಣೆಯ 112 ವಾಹನದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕಾಗಮಿಸಿದ 112 ವಾಹನದ ಸಿಬ್ಬಂದಿಗಳಾದ ರಾಘವೇಂದ್ರ ಎಸ್.ಕೆ. ಹಾಗೂ ಪವಾರ್ ಎಸ್.ಪಿ. ಅವರು ನೀರಿನಲ್ಲಿ ತೇಲಿ ಹೋಗುತ್ತಿದ್ದ ಶವವನ್ನು ಬಿದಿರಿನ ಬೊಂಬು ಬಳಸಿ ತಡೆದು ನಿಲ್ಲಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ನಾಲೆಯಿಂದ ಶವವನ್ನು ಹೊರ ತೆಗೆದಿದ್ದಾರೆ.
ಭಾಗಶಃ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಇತರೆ ವಿವರಗಳು ಕುರಿತಂತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.
