ಶಿವಮೊಗ್ಗ, ನ. 19: ಭಾರತ – ಆಸ್ಟ್ರೇಲಿಯಾ ನಡುವಣ ವಿಶ್ವ ಕಪ್ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಪಂದ್ಯ ಆರಂಭವಾಗಲಿದೆ.
ಶಿವಮೊಗ್ಗದಲ್ಲಿಯೂ ಕ್ರಿಕೆಟ್ ಕ್ರೇಜ್ ಜೋರಾಗಿದೆ. ಭಾರತದ ಗೆಲುವಿಗೆ ಕ್ರಿಕೆಟ್ ಪ್ರೇಮಿಗಳು ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ ಕ್ರಿಕೆಟ್ ಪ್ರೇಮಿಗಳಿಗೆ ಟಿವಿಯಲ್ಲಿ ನೇರ ಪ್ರಸಾರವಾಗುವ ಪಂದ್ಯಾವಳಿ ವೀಕ್ಷಣೆಗೆ ಅನುಕೂಲ ಕಲ್ಪಿಸಿಕೊಡಲು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂದಾಗಿದೆ.
ನಗರದ ನೆಹರು ಕ್ರೀಡಾಂಗಣದ ಮುಂಭಾಗ ಬೃಹತ್ ಎಲ್ಇಡಿ ಪರದೆ ಮೂಲಕ ಕ್ರಿಕೆಟ್ ಪಂದ್ಯದ ನೇರ ವೀಕ್ಷಣೆಯ ವ್ಯವಸ್ಥೆ ಮಾಡಿದೆ.
‘ಎಲ್ಇಡಿ ಪರದೆ, ಸೌಂಡ್ ಸಿಸ್ಟಮ್ ಹಾಕಲಾಗಿದೆ. ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕ್ರಿಕೆಟ್ ಪ್ರೇಮಿಗಳು ಶಾಂತಿಯುತವಾಗಿ ಪಂದ್ಯಾವಳಿ ವೀಕ್ಷಿಸಬೇಕು. ಪ್ರವೇಶ ಸಂಪೂರ್ಣ ಉಚಿತವಾಗಿದೆ’ ಎಂದು ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಸ್ವಾಮಿ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

