ಕೇವಲ ಹತ್ತು ದಿನದಲ್ಲಿ ಕೆರೆ ಕಟ್ಟಿ ಲೋಕಾರ್ಪಣೆ ಮಾಡಿದ ದಾನಿಗಳು, ಪರಿಸರ ಪ್ರೇಮಿಗಳು!

ಶಿವಮೊಗ್ಗ, ಮಾ.12: ಸರ್ಜಿ ಫೌಂಡೇಶನ್‌, ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗೆ ಕ್ರಿಕೆಟ್‌ ಅಕಾಡೆಮಿ ಹಾಗೂ ಪರಿಸರಾಸಕ್ತರು ಒಡಗೂಡಿ  ಶಿವಮೊಗ್ಗದ ಬಿದರೆ ಮಲ್ನಾಡ್‌ ಕ್ಯಾನ್ಸರ್‌ ಆಸ್ಪತ್ರೆ ಎದುರಿನ ಶ್ರೀ ಸಾಯಿಬಾಬಾ ಮಂದಿರ ಬಳಿ ನೂತನ ಕೆರೆಯನ್ನು ನಿರ್ಮಿಸಿ ಭಾನುವಾರ ಬಸವಕೇಂದ್ರದ ಡಾ. ಶ್ರೀಬಸವ ಮರುಳಸಿದ್ಧ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಲೋಕಾರ್ಪಣೆ ಮಾಡಿದರು. 

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬಸವಕೇಂದ್ರದ ಡಾ. ಶ್ರೀಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಯಜ್ಞ ಯಾಗದಿಂದ ಮಳೆ ಬರುತ್ತದೆ ಎನ್ನುವುದು ಹಿಂದಿನ ಕಾಲದ ಮಾತು. ಅದೀಗ ಪರಿಸರಕ್ಕೆ ಹಾನಿಯೇ ಉಂಟು ಮಾಡುತ್ತದೆ ಎಂದು ಹೇಳಬಹುದು. ಮೊದಲೆಲ್ಲಾ ಕೃತಜ್ಞಾತಾ ಪೂರ್ವಕವಾಗಿ ಪಂಚಭೂತಗಳಿಗೆ ಯಾಗ ಯಜ್ಞ ಮಾಡುತ್ತಿದ್ದರು. ಈಗ ನಾವು ಕೆರೆ ಕಟ್ಟೆಗಳನ್ನು ಉಳಿಸುವುದೇ ದೊಡ್ಡ ಯಾಗ ಯಜ್ಞವಾಗಿದೆ. ಮೊದಲು ಪ್ರಜೆಗಳಿಗೆ, ಗುರುಗಳಿಗೆ, ತಂದೆ ತಾಯಿಗಳಿಗೆ ಕೃತಜ್ಞತೆಗಾಗಿ ಯಾಗವನ್ನುಮಾಡುವ ಪದ್ಧತಿ ಇತ್ತು. ಈಗ ಭೂತ ಯಜ್ಞದ ಅವಶ್ಯವಿದ್ದು, ಭೂಮಿ, ಗಾಳಿ, ನೀರು, ಬೆಂಕಿ, ಬಯಲನ್ನು  ಹಾಳು ಮಾಡದೇ ಇರುವುದು ಭೂತ ಯಜ್ಞ. ಪಂಚಭೂತಗಳನ್ನು ಸುಸ್ಥಿರವಾಗಿಡುವುದೇ ನಾವು ಮಾಡುವ ಯಜ್ಞ. ಕೆರೆಗಳಿಗೆ ಮರುಜೀವ ಕೊಟ್ಟರೆ ಅಪರೂಪದ ಆಸ್ತಿಯಾಗುತ್ತದೆ, ಅಂತರ್ಜಲ ವೃದ್ಧಿಯಾಗುತ್ತದೆ  ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ, ಶಿವಮೊಗ್ಗಕ್ಕೆ ಪರಿಸರ ಪ್ರೇಮಿಗಳ ಕೊಡುಗೆ ಬಹು ದೊಡ್ಡದಿದೆ. ಪರೋಪಕಾರಂ ಇರಬಹುದು, ಪರ್ಯಾವರಣ ಟ್ರಸ್ಟ್‌, ಪರೋಪಕಾರಣ ಇರಬಹುದು, ಎಲ್ಲರೂ ಸೇರಿಕೊಂಡು ತುಂಬಾ ಪರಿಸರ ಪೂರಕ ಕೆಲಸ, ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.  

ಮನುಷ್ಯ ಬಾಳಬೇಕಾದರೆ ಪರಿಸರವನ್ನು ಉಳಿಸುವುದು ತುಂಬಾ ಅಗತ್ಯವಿದೆ. ನೀರಿನ ಸಂಗ್ರಹಣೆ ತುಂಬಾ ಅಗತ್ಯವಿದೆ. ಭಗವಂತನ ಸೃಷ್ಟಿ ಇದು, ಕರ್ನಾಟಕ ನೀರಿನ ಲೆವೆಲ್‌ 4 ರಿಂದ 5 ಮೀಟರ್‌ಗೆ ಬಂದಿದೆ, ಸುಮಾರು 4 ಸಾವಿರ ಬಿಲಿಯನ್‌ ಕ್ಯೂಬಿಕ್‌ ಮೀಟರ್‌ ಮಳೆಯಿಂದ ಲಭ್ಯವಾಗುತ್ತದೆ. ಈ ಪೈಕಿ ಮೂರನೇ ಒಂದು ಭಾಗದಷ್ಟು ನೀರು ವಿವಿಧ ಕೆರೆ, ಕಟ್ಟೆ, ಜಲಾಶಯ ಸೇರಿದಂತೆ ನೀರು ಸಂಗ್ರಹವಾಗುತ್ತದೆ. ಉಳಿದೆಲ್ಲಾ ನೀರು ಸಮುದ್ರದ ಪಾಲು ಆಗುತ್ತದೆ. ಭೂಮಿಯು ನೀರನ್ನು ಹೀರಿಕೊಂಡಷ್ಟು ನೀರಿನ ಸೆಲೆ ಹೆಚ್ಚಾಗುತ್ತ ಹೋಗುತ್ತದೆ. ಇಲ್ಲವಾದರೆ ಭೂಕುಸಿತ, ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ನೀರಿನ ಸಂಗ್ರಹ ಮತ್ತು ನೀರನ್ನು ಉಳಿಸುವಲ್ಲಿ ಕೆರೆ ಕಟ್ಟೆಗಳು ಅಭಿವೃದ್ಧಿ ಅತಿ ಮುಖ್ಯ. ಒಟ್ಟು ನೀರಿನ ಪ್ರಮಾಣದಲ್ಲಿ ಶೇ.70 ರಷ್ಟು ಕೃಷಿಗೆ ಬಳಕೆಯಾದರೆ, ಶೇ.8 ರಿಂದ 9 ರಷ್ಟು ನೀರು ಗೃಹ ಬಳಕೆ ಇತ್ಯಾದಿಗೆ ಹೋಗುತ್ತದೆ. 2 ರಷ್ಟು ಕೈಗಾರಿಕೆಗಳಿಗೆ  ಹೋಗುತ್ತದೆ, ಇತ್ತೀಚಿನ ಎರಡು ವರ್ಷಗಳಲ್ಲಿ ಮಳೆ ಪ್ರಮಾಣ ಇಳಿಕೆ ಆಗಿತ್ತು, ಮಳೆ ಹೆಚ್ಚಾದ್ದರಿಂದ ಶೇ. 14 ರಿಂದ 15 ರಷ್ಟು ಏರಿಕೆ ಕಂಡಿದೆ. ಕೆರೆ -ಕಟ್ಟೆಗಳ ನಿರ್ಮಾಣದಂತಹ ಕೆಲಸಗಳು ನಮಗೆ ಪೂರಕವಾಗುತ್ತವೆ.  ಇಲ್ಲದಿದ್ದರೆ ಕುಡಿಯಲಿಕ್ಕೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ  ಮಳೆ ನೀರನ್ನು ಉಳಿಸಬೇಕಾದರೆ ಕೆರೆ ಕಟ್ಟೆಗಳ ಜೀರ್ಣೋದ್ಧಾರ ಅತೀ ಅವಶ್ಯ ಎಂದು ಅಭಿಪ್ರಾಯಪಟ್ಟರು. 

ಇದಕ್ಕೂ ಮೊದಲು ಕೆರೆಯಲ್ಲಿ ಗಂಗಾ ಪೂಜೆಯನ್ನು ಡಾ.ಧನಂಜಯ ಸರ್ಜಿ ಮತ್ತು ನಮಿತಾ ಸರ್ಜಿ ದಂಪತಿ ನೀರನ್ನು ಕೆರೆಗೆ ಸಮರ್ಪಿಸುವ ಮೂಲಕ ಕೆರೆಯನ್ನು ಲೋಕಾರ್ಪಣೆ ಮಾಡಿದರು.

 ಈ ಸಂದರ್ಭ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಯೇಸು ಪ್ರಕಾಶ್‌ ಅವರಿಗೆ ಸರ್ಜಿ ಫೌಂಡೇಶನ್‌ ವತಿಯಿಂದ ನೀವು ನಮ್ಮ ಹೆಮ್ಮೆ ಸ್ಮರಣಿಕೆ ನೀಡಿ ಡಾ.ಧನಂಜಯ ಸರ್ಜಿ ಅವರು ಸನ್ಮಾನಿಸಿ, ಗೌರವಿಸಿದರು. 

ಈ ಸಂದರ್ಭ ವಿಧಾನ ಪರಿಷತ್‌ ಸದಸ್ಯರಾದ  ಡಿ. ಎಸ್‌. ಅರುಣ್‌, ಪರಿಸರ ಪ್ರೇಮಿಗಳಾದ ಪ್ರೊ.ಬಿ.ಎಂ.ಕುಮಾರ ಸ್ವಾಮಿ,  ತ್ಯಾಗರಾಜ್‌ ಮಿತ್ಯಾಂತ , ಬಾಲುನಾಯ್ಡು,  ಮಾಜಿ ನಗರ ಸಭಾಧ್ಯಕ್ಷ ಎಂ.ಶಂಕರ್‌, ಸೂಡಾ ಮಾಜಿ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿ ಪ್ರಕಾಶ್‌ ,ಅಡ್ವೋಕೇಟ್‌ ಅಶೋಕ್‌ಭಟ್‌, ಡಾ.ಬಾಲಕೃಷ್ಣ ಹೆಗಡೆ, ದಿನೇಶ್‌ ಹಾಗೂ ಸಾಯಿಬಾಬಾ ಮಂದಿರದ ಸಮಿತಿಯ ಪ್ರಮುಖರು, ಪದಾಧಿಕಾರಿಗಳು ಹಾಜರಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *