shimoga | ಶಿವಮೊಗ್ಗ : ಕಾಡಾನೆಗಳ ದಾಳಿಗೆ ನೂರಾರು ಬಾಳೆ, ಅಡಕೆ ಗಿಡಗಳು ನಾಶ!
ಶಿವಮೊಗ್ಗ (shivamogga), ನ. 4: ಶಿವಮೊಗ್ಗ ತಾಲೂಕಿನ ಆಲದೇವರ ಹೊಸೂರು, ಗುಡ್ಡದ ಅರಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಸುತ್ತಮುತ್ತಲಿನ ತೋಟ, ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಫಸಲು ನಾಶಗೊಳಿಸಿವೆ ಎಂದು ರೈತರು ತಿಳಿಸಿದ್ದಾರೆ.
‘ಗುಡ್ಡದ ಅರಕೆರೆಯಲ್ಲಿರುವ ತಮ್ಮ ತೋಟಕ್ಕೆ ಕಾಡಾನೆಗಳು ಕಳೆದ ಮೂರು ದಿನಗಳಿಂದ ನಿರಂತರವಾಗಿ ದಾಳಿ ನಡೆಸುತ್ತಿವೆ. ಇದರಿಂದ ಸರಿಸುಮಾರು 1500ಬಾಳೆ ಗಿಡಗಳು ಹಾಗೂ 500 ಕ್ಕೂ ಅಧಿಕ ಅಡಕೆ ಗಿಡಗಳು ನಾಶವಾಗಿವೆ. ಅದೇ ರೀತಿಯಲ್ಲಿ ಭತ್ತದ ಗದ್ದೆಗೂ ನುಗ್ಗಿ ಬೆಳೆ ಹಾನಿ ಮಾಡಿವೆ’ ಎಂದು ತೋಟದ ಮಾಲೀಕರಾದ ವೆಂಕಟೇಶ್ ರವರು ತಿಳಿಸಿದ್ಧಾರೆ.
ಸೋಮವಾರ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಯು ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಿರಂತರ ದಾಳಿ : ಕಳೆದೆರೆಡು ದಿನಗಳ ಹಿಂದೆ ಆಲದೇವರ ಹೊಸೂರು ಗ್ರಾಮದಲ್ಲಿರುವ ಚೇತನಗೌಡ ಎಂಬುವರ ತೋಟಕ್ಕೆ ನುಗ್ಗಿದ್ದ ಕಾಡಾನೆಗಳ ಹಿಂಡು, ಸುಮಾರು 20 ಕ್ಕೂ ಅಧಿಕ ತೆಂಗಿನ ಮರಗಳನ್ನು ಕಿತ್ತು ಹಾಕಿ ನಾಶಗೊಳಿಸಿದ್ದವು.
ಅದೇ ರೀತಿಯಲ್ಲಿ ಸುತ್ತಮುತ್ತಲಿನ ತೋಟ, ಗದ್ದೆಗಳಿಗೂ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸಿ ಅಪಾರ ಪ್ರಮಾಣದ ಫಸಲನ್ನು ನಾಶಗೊಳಿಸುತ್ತಿವೆ. ಆದರೆ ಅರಣ್ಯ ಇಲಾಖೆ ಮಾತ್ರ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಯಾವುದೆ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯ ಜಮೀನು, ತೋಟಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
The problem of elephants continues in the areas around Aladevara Hosur and Arakere in Gudda of Shimoga taluk. Farmers said that they have entered the surrounding gardens and fields and destroyed a huge amount of crops.
