Dharmasthala | ಧರ್ಮಸ್ಥಳ ಪ್ರಕರಣ : ಕೊನೆಗೂ ವಿಶೇಷ ತನಿಖಾ ತಂಡ ರಚಿಸಿದ ರಾಜ್ಯ ಸರ್ಕಾರ!

Dharmasthala case: The state government has finally formed a special investigation team! ಧರ್ಮಸ್ಥಳ ಪ್ರಕರಣ : ಕೊನೆಗೂ ವಿಶೇಷ ತನಿಖಾ ತಂಡ ರಚಿಸಿದ ರಾಜ್ಯ ಸರ್ಕಾರ!

ಬೆಂಗಳೂರು (bengaluru), ಜು. 20: ಧರ್ಮಸ್ಥಳದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನರ ಶವ ಹೂತು ಹಾಕಿರುವುದಾಗಿ ಅನಾಮಧೇಯ ವ್ಯಕ್ತಿ ನೀಡಿರುವ ಹೇಳಿಕೆ ರಾಷ್ಟ್ರಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಸದರಿ ವಿಷಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸದ್ದು ಮಾಡುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಸದರಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ಆದೇಶ ಹೊರಡಿಸಿದೆ.

ಪೊಲೀಸ್ ಇಲಾಖೆಯ ಆಂತರಿಕ ವಿಭಾಗದ ಪೊಲೀಸ್‌ ಮಹಾ ನಿರ್ದೇಶಕ ಡಾ. ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಸದರಿ ತಂಡದಲ್ಲಿ ನೇಮಕಾತಿ ವಿಭಾಗದ ಉಪ ಪೊಲೀಸ್‌ ಮಹಾ ನಿರೀಕ್ಷಕ ಎಂ ಎನ್‌ ಅನುಚೇತ್‌, ಸಿಎಆರ್‌ ಕೇಂದ್ರ ಸ್ಥಾನದ ಉಪ ಪೊಲೀಸ್‌ ಆಯುಕ್ತರಾದ ಸೌಮ್ಯಲತಾ ಹಾಗೂ ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಅಧೀಕ್ಷಕ ಜಿತೇಂದ್ರ ಕುಮಾರ್‌ ದಯಾಮರನ್ನು ನೇಮಿಸಲಾಗಿದೆ.

ಭಾರೀ ಸದ್ದು : ಕೆಲ ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸಫಾಯಿ ಕರ್ಮಚಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ನಂತರ ತಲೆಮರೆಸಿಕೊಂಡಿದ್ದ ವ್ಯಕ್ತಿಯೋರ್ವ, ಇತ್ತೀಚೆಗೆ ವಕೀಲರ ಮೂಲಕ ಧರ್ಮಸ್ಥಳದಲ್ಲಿ ನಡೆದಿದ್ದ ಅನಾಮಧೇಯ ಶವಗಳ ರಹಸ್ಯ ಅಂತ್ಯಕ್ರಿಯೆಯ ಕುರಿತಂತೆ ಹೇಳಿಕೆಯೊಂದನ್ನು ನೀಡಿದ್ದ.

ಹಲವು ವರ್ಷಗಳಿಂದ ಅತ್ಯಾಚಾರ, ಕೊಲೆ ಸೇರಿದಂತೆ ನಾನಾ ಕಾರಣಗಳಿಂದ ಮೃತಪಟ್ಟ ಮಹಿಳೆಯರು, ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿದಂತೆ ಹಲವರ ಶವಗಳನ್ನು ಕೆಲವರ ಅಣತಿಯಂತೆ ತಾವು ಧರ್ಮಸ್ಥಳದ ಕಾಡಿನಲ್ಲಿ ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ. ಈ ಕುರಿತಂತೆ ತಾನೇ ಹೂತು ಹಾಕಿದ್ದ ಶವವೊಂದರ ತಲೆ ಬುರುಡೆಯೊಂದಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದ.

ಸದರಿ ವಿಷಯ ರಾಷ್ಟ್ರಾದ್ಯಂತ ಚರ್ಚೆಗೆಡೆ ಮಾಡಿಕೊಟ್ಟಿತ್ತು. ಸದರಿ ಹೇಳಿಕೆಯ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಹೂತು ಹಾಕಿರುವುದಾಗಿ ಹೇಳಲಾಗಿರುವ ಶವಗಳನ್ನು ಹೊರತೆಗೆಯಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಪೊಲೀಸ್ ಇಲಾಖೆಯ ತನಿಖೆಯ ಬಗ್ಗೆಯೂ ವ್ಯಾಪಕ ದೂರುಗಳು ಕೇಳಿಬಂದಿದ್ದವು.

ಸದರಿ ಪ್ರಕರಣದ ಕುರಿತಂತೆ ವಿಶೇಷ ತನಿಖಾ ತಂಡ ರಚಿಸಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರದ ವಿಳಂಬದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಅಸಮಾಧಾನ, ಟೀಕೆಗಳು ವ್ಯಕ್ತವಾಗಿದ್ದವು. ಈ ಎಲ್ಲದರ ನಡುವೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ. ಮುಂದಿನ ದಿನಗಳಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ.

Bengaluru, Jul. 20: The statement made by an anonymous person that hundreds of bodies, including women, were buried in Dharmasthala has created a huge stir across the country. Meanwhile, the state government has issued an order to form a Special Investigation Team (SIT) to investigate the case.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →