shimoga news | ಶಿವಮೊಗ್ಗ : ಸರ್ಕಾರಿ ಸಿಟಿ ಬಸ್ ಓಡಿಸಲು ಆಗ್ರಹಿಸಿ ಡಿಸಿಗೆ ನಾಗರೀಕರ ಮನವಿ
ಶಿವಮೊಗ್ಗ (shivamogga), ನವೆಂಬರ್ 19: ಸರ್ಕಾರಿ ಸಿಟಿ ಬಸ್ ಓಡಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಶಾಂತಿನಗರ ನಾಗರೀಕರ ಹಕ್ಕುಗಳ ವೇದಿಕೆಯು, ನವೆಂಬರ್ 19 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಪತ್ರ ಅರ್ಪಿಸಿತು.
ಶಾಂತಿನಗರ ಭಾಗದಲ್ಲಿ ಸಂಚರಿಸುವ ಖಾಸಗಿ ಸಿಟಿ ಬಸ್ ಗಳು ಯಮಸ್ವರೂಪಿಯಾಗಿ ಪರಿಣಮಿಸಿವೆ. ಬಸ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದ್ದಾರೆ. 16/11/2025 ರಂದು ಖಾಸಗಿ ಸಿಟಿ ಬಸ್ ಅಪಘಾತ ಪ್ರಕರಣದಲ್ಲಿ ಅಮಾಯಕ ಯುವಕ ಬಲಿಯಾಗಿ, ಹಲವರು ಗಾಯಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಸದರಿ ಅಪಘಾತ ಪ್ರಕರಣಕ್ಕೆ ಖಾಸಗಿ ಸಿಟಿ ಬಸ್ ಸಿಬ್ಬಂದಿಗಳಷ್ಟೆ ಅಲ್ಲದೆ, ಫ್ಲೈ ಓವರ್ ಬಳಿ ರಸ್ತೆ ಕೆಲಸ ಮಾಡುತ್ತಿರುವ ಗುತ್ತಿಗೆದಾರನು ಕಾರಣಕರ್ತನಾಗಿದ್ದಾನೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಖಾಸಗಿ ಸಿಟಿ ಬಸ್ ಡಿಕ್ಕಿಯಿಂದ ಮೃತಪಟ್ಟ ಆಟೋ ಚಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಶಾಂತಿನಗರ ಭಾಗದಲ್ಲಿ ಖಾಸಗಿ ಸಿಟಿ ಬಸ್ ಸಂಚಾರ ನಿಷೇಧಿಸಿ, ಸರ್ಕಾರಿ ಸಿಟಿ ಬಸ್ ಓಡಿಸಬೇಕು. ಅಪಘಾತಕ್ಕೆ ಕಾರಣವಾದ ಬಸ್ ಚಾಲಕನ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಮನವಿ ಅರ್ಪಿಸುವ ವೇಳೆ ಸಂಘಟನೆ ಅಧ್ಯಕ್ಷ ಸಯ್ಯದ್ ಮುಜೀಬುಲ್ಲಾ, ಮುಖಂಡರಾದ ರಾಮು, ರಿಜ್ವಾನ್, ನಾಸೀರುದ್ದಿನ್, ಆನಂದ್ ಮೊದಲಾದವರಿದ್ದರು.
Shivamogga, November 19: The Shantinagar Citizens’ Rights Forum submitted a petition to DC Gurudatta Hegde at the District Collector’s office on November 19, demanding action to be taken to run government city buses.
