ಬೆಂಗಳೂರು (bengaluru), ಏಪ್ರಿಲ್ 22: ಶಿವಮೊಗ್ಗ ಐಸಿಸ್ ಭಯೋತ್ಪಾದನಾ ಪಿತೂರಿ ಕೇಸ್ ಗೆ ಸಂಬಂಧಿಸಿದಂತೆ, ಎನ್ ಐ ಎ ವಿಶೇಷ ನ್ಯಾಯಾಲಯವು ಮತ್ತೋರ್ವನಿಗೆ 6 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅರಾಫತ್ ಆಲಿ ಜೈಲು ಶಿಕ್ಷೆಗೆ ಗುರಿಯಾದವನೆಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ 47 ಸಾವಿರ ರೂ. ದಂಡ ವಿಧಿಸಲಾಗಿದೆ.
ಈಗಾಗಲೇ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಿಶೇಷ ನ್ಯಾಯಾಲಯವು 2025 ರಲ್ಲಿ ಇಬ್ಬರು ಅಪರಾಧಿಗಳಿಗೆ 6 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.
ಏನೀದು ಪ್ರಕರಣ? : ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ ಪ್ರಕರಣವು, ಕರ್ನಾಟಕದಲ್ಲಿ ಐಸಿಸ್ (ISIS) ಸಂಬಂಧಿತ ಭಯೋತ್ಪಾದನಾ ಸಂಚು ಪ್ರಕರಣದ ಭಾಗವಾಗಿದೆ. . 2022 ರ ಸೆಪ್ಟೆಂಬರ್ನಲ್ಲಿ ತುಂಗಾ ನದಿ ತೀರದಲ್ಲಿ ಬಾಂಬ್ ಸ್ಫೋಟದ ಪ್ರಯೋಗ (ಟ್ರಯಲ್ ಬ್ಲಾಸ್ಟ್) ನಡೆದಿತ್ತು. ಇದು ಐಸಿಸ್ ಪ್ರೇರಿತ ಯುವಕರು ತಯಾರಿಸಿದ ಐಇಡಿ ಬಾಂಬ್ಗಳನ್ನು ಪರೀಕ್ಷಿಸಲು ಮಾಡಿದ ಪ್ರಯೋಗವಾಗಿತ್ತು ಎಂದು ತಿಳಿದುಬಂದಿತ್ತು.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್ಐಎ ತನಿಖಾ ತಂಡವು 12 ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿತ್ತು.
ಬೆಳಕಿಗೆ ಬಂದಿದ್ದು ಹೇಗೆ? : 2022 ರ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ, ಶಿವಮೊಗ್ಗ ನಗರದ ಅಮೀರ್ ಅಹಮದ್ ವೃತ್ತದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಕುರಿತಂತೆ ವಿವಾದ ಉಂಟಾಗಿ ಗಲಾಟೆಯಾಗಿತ್ತು. ಈ ವೇಳೆ ಗಾಂಧಿ ಬಜಾರ್ ರಸ್ತೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನೋರ್ವನಿಗೆ ಚೂರಿಯಿಂದ ಇರಿಯಲಾಗಿತ್ತು.
ಈ ಸಂಬಂಧ ಜಬೀವುಲ್ಲಾ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ತುಂಗಾ ನದಿ ತೀರದಲ್ಲಿ ಬಾಂಬ್ ಸ್ಫೋಟ, ಶಂಕಿತ ಉಗ್ರರ ಚಟುವಟಿಕೆ ಸೇರಿದಂತೆ ವಿವಿಧ ಮಹತ್ವದ ಮಾಹಿತಿಗಳು ಲಭ್ಯವಾಗಿದ್ದವು. ತದನಂತರ ಸದರಿ ಪ್ರಕರಣವನ್ನು ರಾಜ್ಯ ಸರ್ಕಾರ ಎನ್ಐಎ ತನಿಖೆಗೊಪ್ಪಿಸಿತ್ತು.

