ಸಾಗರ (sagara), ಮೇ 26: ಪತಿಯ ಕೊ**ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಸಾಗರ ಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿ ಮಂಜು ಯಾನೆ ಟೀಪುಡಿ ಮಂಜು ಹಾಗೂ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಚೈತ್ರಾ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಸಾಗರ ಪಟ್ಟಣದ ಜೆ ಪಿ ನಗರದ ನಿವಾಸಿ ಪರಶುರಾಮ್ (40) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಕುರಿತಂತೆ ಮೇ 26 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಪ್ರಕರಣದ ಹಿನ್ನೆಲೆ : ಆರೋಪಿ ಮಂಜು ಹಾಗೂ ಚೈತ್ರಾ ನಡುವೆ ಅನೈತಿಕ ಸಂಬಂಧವಿತ್ತು. ಈ ಕುರಿತಂತೆ ಆಗಾಗ್ಗೆ ಪರಶುರಾಮ್ ಹಾಗೂ ಚೈತ್ರಾ ನಡುವೆ ಗಲಾಟೆಯಾಗುತ್ತಿತ್ತು.
ಮೇ 15 ರ ರಾತ್ರಿ ಕೌಟಂಬಿಕ ವಿಚಾರದ ಕುರಿತಂತೆ ದಂಪತಿ ನಡುವೆ ಗಲಾಟೆ ಏರ್ಪಟ್ಟಿದೆ. ಈ ವೇಳೆ ಆರೋಪಿ ಮಂಜು ಮನೆಗೆ ಆಗಮಿಸಿದ್ದು, ಪರಶುರಾಮ್ ಜೊತೆ ಗಲಾಟೆ ಮಾಡಿದ್ದಾನೆ.
ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪರಶುರಾಮ್ ಕುಡುಗೋಲು ಹಾಗೂ ಮಂಜು ಚಾಕು ಹಿಡಿದುಕೊಂಡು ಜಗಳ ಮಾಡಿದ್ದಾರೆ. ಈ ವೇಳೆ ಪರಶುರಾಮ್ ಚೂರಿ ಇರಿತಕ್ಕೊಳಗಾಗಿದ್ದು, ನೆರೆಮನೆಯವರು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪದ ಮೇರೆಗೆ ಮಂಜು ಹಾಗೂ ಕೃತ್ಯವನ್ನು ಮುಚ್ಚಿಟ್ಟ ಆಪಾದನೆ ಮೇರೆಗೆ ಚೈತ್ರಾಳನ್ನು ಸಾಗರ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

