ಶಿವಮೊಗ್ಗ, ನ. 14: ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ಆರೋಪದ ಮೇರೆಗೆ, ನಾಲ್ವರು ಯುವಕರನ್ನು ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಭದ್ರಾವತಿ ತಾಲೂಕಿನ ಬಾಬಳ್ಳಿ ಗ್ರಾಮದ ದೇವರಾಜ್ (31), ಶಿವಮೊಗ್ಗದ ಕೋಟೆಗಂಗೂರಿನ ಸಾಗರ್ ಯಾನೆ ಶಬರೀಶ್ (22), ಭದ್ರಾವತಿ ಭದ್ರಾ ಕಾಲೋನಿ ನಿವಾಸಿ ನಾಗರಾಜ್ ಯಾನೆ ಕುಮಾರ್ (38) ಹಾಗೂ ಭದ್ರಾವತಿ ಶಾಂತಿನಗರದ ನಿವಾಸಿ ಶ್ರೇಯಸ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ನ. 10 ರಂದು ರಾತ್ರಿ ನಗರದ ಎನ್.ಟಿ. ರಸ್ತೆಯ ಫಲಕ್ ಶಾದಿ ಮಹಲ್ ಪಕ್ಕದಲ್ಲಿ ನಾಲ್ಕೈದು ಜನ ಯುವಕರ ಗುಂಪೊಂದು ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕುತ್ತಿರುವ ಕುರಿತಂತೆ ಪೊಲೀಸರಿಗೆ ಖಚಿತ ವರ್ತಮಾನ ಲಭಿಸಿತ್ತು.
ಇದರ ಆಧಾರದ ಮೇಲೆ ಗಸ್ತಿನಲ್ಲಿದ್ದ ಸಬ್ ಇನ್ಸ್’ಪೆಕ್ಟರ್ ಶ್ರೀನಿವಾಸ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ ನಾಲ್ವರನ್ನು ವಶಕ್ಕೆ ಪಡೆಯುವಲ್ಲಿ ಸಫಲವಾಗಿತ್ತು.
ಬಂಧಿತರಿಂದ ಕಬ್ಬಿಣದ ರಾಡು, ಮಚ್ಚು, 2 ಸ್ಟೀಲ್ ಡ್ರಾಗನ್, ಖಾರದ ಪುಡಿಯಿದ್ದ ಕವರ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

