ಶಿವಮೊಗ್ಗ, ಮೇ 29: ಶಿವಮೊಗ್ಗ ನಗರದಲ್ಲಿ ಸೋಮವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಬಿದ್ದ ಭಾರೀ ಮಳೆಯ ವೇಳೆ ಸಿಡಿಲು ಬಡಿದು ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಹಾಗೆಯೇ ನಗರದ ವಿವಿಧೆಡೆ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾದ ವರದಿಗಳು ಬಂದಿವೆ.
ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಲಕ್ಷ್ಮೀಬಾಯಿ (28) ಎಂಬ ಮಹಿಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕುರಿಗಳಿಗೆ ಮೇವು ತರಲು ಮನೆಯಿಂದ ಹೊರಹೊದ ವೇಳೆ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಅಪಾರ ಹಾನಿ: ಬಿರುಗಾಳಿ ಮಳೆಗೆ ನಗರದ ವಿವಿಧೆಡೆ ಮರಗಳು ಉರುಳಿ ಬಿದ್ದಿವೆ. ಸೋಮಿನಕೊಪ್ಪ ಬಡಾವಣೆಯ ಕೆ.ಹೆಚ್.ಬಿ ಕಾಲೋನಿಯಲ್ಲಿ ಬಿರುಗಾಳಿಗೆ ವಾಸದ ಮನೆ, ಲೇಔಟ್ ವೊಂದರ ಶೆಡ್ ಹಾಗೂ ಜಾನುವಾರು ಕೊಟ್ಟಿಗೆಯ ತಗಡಿನ ಶೀಟ್ ಗಳು ಹಾರಿ ಹೋದ ಘಟನೆ ನಡೆದಿದೆ.

