ಮಲೆನಾಡಿನಲ್ಲಿ ಚುರುಕುಗೊಳ್ಳದ ಮುಂಗಾರು ಮಳೆ!

ಮಲೆನಾಡಿನಲ್ಲಿ ಚುರುಕುಗೊಳ್ಳದ ಮುಂಗಾರು ಮಳೆ!

– ಬಿ.ರೇಣುಕೇಶ್-

ಶಿವಮೊಗ್ಗ, ಜೂ. 13: ರಾಜ್ಯದ ಕರಾವಳಿ ಭಾಗಕ್ಕೆ ಮುಂಗಾರು ಮಳೆ ಕಾಲಿಟ್ಟಿದೆ. ಆದರೆ ಮಲೆನಾಡು ಭಾಗದಲ್ಲಿ ವರ್ಷಧಾರೆ ಚುರುಕುಗೊಂಡಿಲ್ಲ. ಸಂಪೂರ್ಣ ದುರ್ಬಲಗೊಂಡಿದೆ. ಇದರಿಂದ ಕೃಷಿ ಚಟುವಟಿಕೆ ಏರುಪೇರಾಗುವಂತೆ ಮಾಡಿದೆ!

ಕಳೆದ ವರ್ಷ ಜೂನ್ ಪ್ರಾರಂಭಕ್ಕೂ ಮೊದಲೇ, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗುತ್ತಿತ್ತು. ನಿಗದಿತ ಅವಧಿಗೆ ಮುಂಗಾರು ಆರಂಭಗೊಂಡಿತ್ತು. ಇದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದವು. ಕೆರೆಕಟ್ಟೆ, ಜಲಾಶಯಗಳಲ್ಲಿ ನೀರಿನ ಸಂಗ್ರಹ ಕೂಡ ಏರಿಕೆಯಾಗಿತ್ತು.

ಆದರೆ ಪ್ರಸ್ತುತ ವರ್ಷ ಬೇಸಿಗೆ ಅವಧಿಯಲ್ಲಿ ಜಿಲ್ಲೆಯಲ್ಲಿ ಹಿಂಗಾರು ಮಳೆಯ ಪ್ರಮಾಣ ಕೂಡ ಕಡಿಮೆಯಾಗಿತ್ತು. ವಾಡಿಕೆಯ ವರ್ಷಧಾರೆಯಾಗಿರಲಿಲ್ಲ. ಇದೀಗ ಮಳೆಗಾಲ ಆರಂಭದ ಜೂನ್ ಎರಡನೇ ವಾರ ಕಳೆದು, ಮೂರನೇ ವಾರ ಕಾಲಿಟ್ಟರೂ ಮುಂಗಾರು ಮಳೆ ಚುರುಕುಗೊಂಡಿಲ್ಲ.

ಮಲೆನಾಡಿನಲ್ಲಿ ಚುರುಕುಗೊಳ್ಳದ ಮುಂಗಾರು ಮಳೆ!

ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಹಲವೆಡೆ ಮಳೆ ಬೀಳಲಾರಂಭಿಸಿತ್ತು. ಆದರೆ ಇದೀಗ ಆ ವರ್ಷಧಾರೆಯೂ ಇಲ್ಲವಾಗಿದೆ. ಇನ್ನೊಂದೆಡೆ ಬಿಸಿಲ ಬೇಗೆ ಕೂಡ ಮುಂದುವರಿದಿದೆ. ಇದು ಸಹಜವಾಗಿಯೇ ರೈತ ಸಮುದಾಯದಲ್ಲಿ ಆತಂಕದ ಕರಿಛಾಯೆ ಆವರಿಸುವಂತೆ ಮಾಡಿದೆ. ಯಾವಾಗ ಮಳೆಯಾಗಲಿದೆಯೋ ಎಂದು ಕಾದು ಕುಳಿತುಕೊಳ್ಳುವಂತೆ ಮಾಡಿದೆ.

ಚಂಡಮಾರುತ ಎಫೆಕ್ಟ್: ಬಿಪರ್ ಜಾಯ್ ಚಂಡಮಾರುತ ಎಫೆಕ್ಟ್ ನಿಂದ ಮುಂಗಾರು ಮಳೆ ಏರುಪೇರಾಗುವಂತೆ ಮಾಡಿದೆ. ತೇವಾಂಶಭರಿತ ಮೋಡಗಳನ್ನು ಸೆಳೆದುಕೊಂಡ ಪರಿಣಾಮ ಮಳೆ ಮಾರುತಗಳು ದುರ್ಬಲಗೊಂಡಿದ್ದು, ಇದರಿಂದ ಮಳೆಯ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳುತ್ತವೆ.

ಸಂಕಷ್ಟ: ಈಗಾಗಲೇ ಜಿಲ್ಲೆಯ ಹಲವೆಡೆ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಜಲಾಶಯಗಳ ನೀರಿನ ಸಂಗ್ರಹದಲ್ಲಿಯೂ ಭಾರೀ ಇಳಿಕೆ ಕಂಡುಬಂದಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಂಪೂರ್ಣ ಬರಿದಾಗುವ ಸ್ಥಿತಿಗೆ ತಲುಪಲಿದೆ. ಹಾಗೆಯೇ ಬೋರ್’ವೆಲ್, ಬಾವಿಗಳು ನೀರಿಲ್ಲದೆ ಒಣಗಲಾರಂಭಿಸಿವೆ.

ಪರಿಸ್ಥತಿ ಇದೇ ರೀತಿ ಮುಂದುವರಿದರೆ ಜಿಲ್ಲೆಯ ನಗರ-ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸ್ವರೂಪದ ಹಾಹಾಕಾರ ತಲೆದೋರುವ ಸಾಧ್ಯತೆಗಳು ಗೋಚರವಾಗುತ್ತಿವೆ.

ಇದೆಲ್ಲದರ ನಡುವೆ ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚುರುಕುಗೊಳ್ಳಲಿದೆ. ಉತ್ತಮ ವರ್ಷಧಾರೆಯಾಗಲಿದೆ ಎಂದು ಹೇಳುತ್ತಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *