ಹೂವು ವ್ಯಾಪಾರಿ ಬಡ ಮಹಿಳೆಯ ಬರ್ಬರ ಹತ್ಯೆ ಪ್ರಕರಣ : ಬಿರುಸುಗೊಂಡ ಪೊಲೀಸ್ ತನಿಖೆ!

ಶಿವಮೊಗ್ಗ, ಮಾ. 11: ಸಂಪೂರ್ಣ ನಿಗೂಢವಾಗಿ ಪರಿಣಮಿಸಿರುವ ಹೂವು ವ್ಯಾಪಾರಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು, ಹೊಳೆಹೊನ್ನೂರು ಠಾಣೆ ಪೊಲೀಸರು ಬಿರುಸುಗೊಳಿಸಿದ್ದಾರೆ.

ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ಆರ್.ಎಲ್. ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಹಂತಕರ ಬಗ್ಗೆ ಕೆಲ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆಂದು ಹೇಳಲಾಗುತ್ತಿದೆ. ಇಷ್ಟರಲ್ಲಿಯೇ ಹತ್ಯೆ ಪ್ರಕರಣದ ಸತ್ಯಾಂಶ ಬಯಲಾಗುವ ಸಾಧ್ಯತೆಗಳಿವೆ.

ನಾಪತ್ತೆ-ಕೊಲೆ!: ಶಿವಮೊಗ್ಗ ನಗರದ ರಾಗಿಗುಡ್ಡ ಬಡಾವಣೆ ನಿವಾಸಿ ಮುಮ್ತಾಜ್ ಬೇಗಂ (45) ಎಂಬುವರೇ ಕೊಲೆಗೀಡಾದ ಮಹಿಳೆಯಾಗಿದ್ದಾರೆ. ಇವರು ಹೂವು ವ್ಯಾಪಾರ ಮಾಡುತ್ತಿದ್ದರು. ಇವರ ಪತಿ ಮೊಹಮ್ಮದ್ ರಫೀಕ್ ಆಟೋ ಚಾಲಕರಾಗಿದ್ದಾರೆ.

ಎಂದಿನಂತೆ 6-3-2023 ರಂದು ಮುಮ್ತಾಜ್ ಬೇಗಂ ಅವರು ಹೂವು ವ್ಯಾಪಾರಕ್ಕೆಂದು ಮನೆಯಿಂದ ಬೆಳಿಗ್ಗೆ 5.30 ಕ್ಕೆ ತಾಲೂಕಿನ ಹೊಳಲೂರು ಗ್ರಾಮಕ್ಕೆ ತೆರಳಿದ್ದಾರೆ. ಆದರೆ ಸಂಜೆಯಾದರೂ ಅವರು ಮನೆಗೆ ಹಿಂದಿರುಗಿರಲಿಲ್ಲ. ಸಂಬಂಧಿಕರ ಮನೆಗಳಲ್ಲಿಯೂ ಅವರ ಸುಳಿವು ಸಿಕ್ಕಿರಲಿಲ್ಲ.

ಹೊಳಲೂರು ಗ್ರಾಮದಲ್ಲಿ ಹೂವು ವ್ಯಾಪಾರ ಮಾಡಿಕೊಂಡು ಮಧ್ಯಾಹ್ನ ಹೋಗಿದ್ದ ವಿವರ ಸ್ಥಳೀಯ ಗ್ರಾಮಸ್ಥರಿಂದ ಗೊತ್ತಾಗಿತ್ತು. 7-3-2023 ರಂದು ಪತಿ ಮೊಹಮ್ಮದ್ ರಫೀಕ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಇದೆಲ್ಲದರ ನಡುವೆಯೇ, ಮಾ. 10 ರಂದು ಹೊಳೆಹೊನ್ನೂರು ಸಮೀಪದ ಸನ್ಯಾಸಿ ಕೊಡಮಗ್ಗೆ ಬಳಿಯ ಭದ್ರಾ ನದಿ ಸೇತುವೆ ಕೆಳಭಾಗದ ಕಸದ ಗುಡ್ಡೆಯ ರಾಶಿಯಲ್ಲಿ, ಮಹಿಳೆಯ ಕೊಲೆಗೀಡಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಚೀಲವೊಂದರಲ್ಲಿ ಮಹಿಳೆಯ ದೇಹವಿರಿಸಿ ಕಸದ ಗುಡ್ಡೆಯಲ್ಲಿ ಎಸೆದಿದ್ದು ಬೆಳಕಿಗೆ ಬಂದಿತ್ತು.

ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಿಗೂಢ: ಮಹಿಳೆಯ ಹತ್ಯೆ ಪ್ರಕರಣ ಸಂಪೂರ್ಣ ನಿಗೂಢವಾಗಿ ಪರಿಣಮಿಸಿದೆ. ಹತ್ಯೆ ಮಾಡಿದವರು ಯಾರು? ಕಾರಣವೇನು? ಎಂಬಿತ್ಯಾದಿ ವಿವರಗಳು ಪೊಲೀಸರ ತನಿಖೆಯ ನಂತರವಷ್ಟೆ ತಿಳಿದುಬರಬೇಕಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *