ಶಿವಮೊಗ್ಗ, ಮಾ. 11: ಬೀದಿ ಬದಿ ಹೂವು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆ ಮುಮ್ತಾಜ್ ಬೇಗಂರವರನ್ನು ಹತ್ಯೆ ಮಾಡಿದ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಜಿಲ್ಲಾಧ್ಯಕ್ಷ ಮಣಿ ಎಸ್ ಗೌಂಡರ್ ಆಗ್ರಹಿಸಿದ್ದಾರೆ.
ಮುಮ್ತಾಜ್ ಬೇಗಂ ಅವರು ಹೂವು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಬಡ ವರ್ಗಕ್ಕೆ ಸೇರಿದವರಾಗಿದ್ದಾರೆ. ಎಂದಿನಂತೆ ಅವರು ಹೂವು ವ್ಯಾಪಾರಕ್ಕೆಂದು ಹೊಳಲೂರಿಗೆ ತೆರಳಿದ್ದು, ಈ ವೇಳೆ ಅವರು ನಾಪತ್ತೆಯಾಗಿದ್ದರು.
ತದನಂತರ ಅವರನ್ನು ಹತ್ಯೆ ಮಾಡಿ, ಚೀಲವೊಂದರಲ್ಲಿ ತುಂಬಿ ಹೊಳಲೂರು ಸಮೀಪದ ಭದ್ರಾ ನದಿ ಸೇತುವೆ ಬಳಿ ಎಸೆದು ಹೋಗಲಾಗಿದೆ. ಮಹಿಳೆಯ ಹತ್ಯೆ ಪ್ರಕರಣವು ಹೇಯ ಕೃತ್ಯವಾಗಿದೆ ಎಂದು ಹೇಳಿದ್ದಾರೆ.
ಮಹಿಳೆಯ ಹತ್ಯೆ ನಡೆಸಿದ ಆರೋಪಿಗಳನ್ನ ಬಂಧಿಸಬೇಕು. ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಬೇಕು ಎಂದು ಮಣಿ ಎಸ್ ಗೌಂಡರ್ ಅವರು ಆಗ್ರಹಿಸಿದ್ದಾರೆ.

