shimoga | ಶಿವಮೊಗ್ಗ ಜಿಲ್ಲೆಯ ‘ಬ್ಲ್ಯಾಕ್ ಸ್ಪಾಟ್’ ಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಸೂಚನೆ!
ಶಿವಮೊಗ್ಗ (shivamogga), ಡಿ. 26 : ಜಿಲ್ಲೆಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಗುರುತಿಸಲಾಗಿರುವ ಅಪಘಾತ ವಲಯ (ಬ್ಲ್ಯಾಕ್ ಸ್ಪಾಟ್) ಗಳಲ್ಲಿ, ಸಂಭವನೀಯ ಅಪಘಾತಗಳನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಭಾರಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓ ಹೇಮಂತ್ ಎನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಲ್ಯಾಕ್ ಸ್ಪಾಟ್ ಗಳನ್ನು ಸರಿಪಡಿಸಲು ತುರ್ತು ಕಾಮಗಾರಿ ಎಂದು ಪರಿಗಣಿಸಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ವಿಫಲವಾದಲ್ಲಿ ಸಂಬಂಧಿಸಿದ ಎಲ್ಲ ಇಂಜಿನಿಯರಿಂಗ್ ಇಲಾಖೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಒಳಗೊಂಡಂತೆ 2016 ರಿಂದ ಇಲ್ಲಿಯವರೆಗೆ, ಒಟ್ಟು 51 ಬ್ಲ್ಯಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. 37 ಸ್ಥಳಗಳು ಎನ್ಹೆಚ್ ಗಳ ವ್ಯಾಪ್ತಿಗೆ ಬರಲಿವೆ. ಇನ್ನುಳಿದವರು ಎಸ್ಹೆಚ್ ಗಳ ವ್ಯಾಪ್ತಿಗೆ ಬರಲಿದ್ದು, ಮುಂದಿನ 2 ತಿಂಗಳುಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಸರಿಪಡಿಸಬೇಕು. ಎಚ್ಚರಕೆ ಫಲಕ, ಸ್ಪೀಡ್ ಬ್ರೇಕರ್, ರಿಫ್ಲೆಕ್ಟರ್ ಸ್ಟಡ್, ಅಪಾಯ ಸೂಚಿಸುವ ಫಲಕ, ಕ್ಯಾಟ್ಐ ಇತ್ಯಾದಿ ಕ್ರಮ ಕೈಗೊಳ್ಳಬೇಕು.
ಹಾಗೂ ಅರಣ್ಯ ಇಲಾಖೆ, ಟ್ರಾಫಿಕ್ ಪೊಲೀಸ್ ಮತ್ತು ಆರ್ಟಿಓ ಇಲಾಖೆ ಜಂಟಿಯಾಗಿ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ತಂಡ ರಚಿಸಿಕೊಂಡು ರಸ್ತೆ ಬದಿಯ ಸಿಗ್ನಲ್ ಲೈಟ್ಗೆ ಅಡ್ಡ ಬೆಳೆದಿರುವ ಮರಗಳನ್ನು ಕತ್ತರಿಸುವ ಅಥವಾ ತೆರವುಗೊಳಿಸಲು ಕ್ರಮ ವಹಿಸಬೇಕು.
ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಪಂಚಾಯ್ತಿ ವ್ಯಾಪ್ತಿಯ ರಸ್ತೆ ಬದಿಗಳಲ್ಲಿರುವ ಬುಶ್ ಕಟಿಂಗ್ ಮತ್ತು ಇತರೆ ರಸ್ತೆ ಸರಿಸಪಡಿಸುವ ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಸೂಚನೆ ನೀಡಿದರು.
ಪೊಲೀಸ್ ಇಲಾಖೆ ಸಲ್ಲಿಸಿರುವ ಬ್ಲ್ಯಾಕ್ ಸ್ಪಾಟ್ ಗಳನ್ನು ಸರಿಪಡಿಸಲು ಲೋಕೋಪಯೋಗಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ, ಸಾರಿಗೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ತಂಡ ರಚಿಸಿಕೊಂಡು ಜಂಟಿ ಭೇಟಿ ನೀಡಿ ತಪಾಸಣೆ ನಡೆಸಿ ಸುಧಾಕರಣಾ ಕ್ರಮಗಳಾದ ಸ್ಪೀಡ್ ಬ್ರೇಕರ್, ಸೂಚನಾ, ಎಚ್ಚರಿಕೆ ಫಲಕಗಳು, ಗುಂಡಿಗಳನ್ನು ಮುಚ್ಚುವ ಕಾರ್ಯ ಹಾಗೂ ರಸ್ತೆ ಬದಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸುವುದು ಸೇರಿದಂತೆ ಇತ್ಯಾದಿ ಶೀಘ್ರ ಹಾಗೂ ಶಾಶ್ವತ ಅಗತ್ಯ ಕ್ರಮ ಕೈಗೊಳ್ಳಬೇಕು.
ಈ ಕೆಲಸಗಳನ್ನು ತುರ್ತು ಕೆಲಸಗಳೆಂದು ಪರಿಗಣಿಸಿ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಸಣ್ಣ ಪುಟ್ಟದ್ದಲ್ಲ ಬದಲಾಗಿ ಮಾರಣಾಂತಿಕ ಅಪಘಾತಗಳೇ ಹೆಚ್ಚಾಗಿವೆ. ಪ್ರವಾಸದ ಸಮಯವಾದ್ದರಿಂದ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಓಡಾಟವೂ ಹೆಚ್ಚಿದೆ. ಆದ್ದರಿಂದ ತುರ್ತಾಗಿ ಈ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ ಅವರು ಕೈಗೊಂಡ ಕ್ರಮಗಳ ಕುರಿತು ಖುದ್ದು ತಾವೇ ಪರಿಶೀಲಿಸುವುದಾಗಿ ತಿಳಿಸಿದರು.
ಹಾಗೂ ಒಂದು ವೇಳೆ ಈ ಸ್ಥಳಗಳಲ್ಲಿ ಅಪಘಾತ ಸಂಭವಿಸಿದಲ್ಲಿ ಪಿಡಬ್ಲ್ಯೂಡಿ ಹಾಗೂ ಸಂಬಂಧಿಸಿದ ಇಂಜಿನಿಯರಿಂಗ್ ವಿಭಾಗದ ವಿರುದ್ದ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮಾತನಾಡಿ, ನಗರದಲ್ಲಿ ದೊಡ್ಡ ದೊಡ್ಡ ಆಸ್ಪತ್ರೆ, ಕಟ್ಟಡಗಳ ಸೆಲ್ಲರ್ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿಲ್ಲ. ಬದಲಾಗಿ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಎನ್ಹೆಚ್ 206 ರಲ್ಲಿ ಸಂದೇಶ್ ಮೋಟಾರ್ಸ್ ನಿಂದ ಅಡಕೆ ಮಂಡಿವರೆಗೆ ಎಚ್ಚರಿಕೆ ಫಲಕಗಳು ಇಲ್ಲ. ಈ ಬಗ್ಗೆ ಪಾಲಿಕೆಗೆ ಪತ್ರ ಬರೆಯಲಾಗಿದೆ. ಹಾಗೂ ನಗರದ 5 ಜಾಗಳಲ್ಲಿ ಸಿಗ್ನಲ್ ವ್ಯವಸ್ಥೆ ಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆಂದು ತಿಳಿಸಿದರು.
ಪ್ರಭಾರಿ ಜಿಲ್ಲಾಧಿಕಾರಿಗಳು, ಅನಧಿಕೃತ ಪಾರ್ಕಿಂಗ್ ವಿರುದ್ದ ದಂಡ ಹಾಗೂ ಟೋಯಿಂಗ್ ಕ್ರಮ ಕೈಗೊಳ್ಳಲು ಟ್ರಾಫಿಕ್ ಪೊಲೀಸ್ರಿಗೆ ಹಾಗೂ ನಗರದಲ್ಲಿ ಅಗತ್ಯವಿರುವೆಡೆ ಸೂಚನಾ ಫಲಕ ಮತ್ತು ಎಚ್ಚರಿಕೆ ಫಲಕಗಳು, ಹಂಪ್ಸ್ ಗಳಿಗೆ ರಿಫ್ಲೆಕ್ಟರ್ ಅಳವಡಿಸಲು ಪಾಲಿಕೆಗೆ ಪತ್ರ ಬರೆಯುವಂತೆ ತಿಳಿಸಿದರು. ರೈಲ್ವೆ ನಿಲ್ದಾಣದ ಬಳಿ ಸಿಟಿ ಬಸ್ ನಿಲುಗಡೆ ಸಮಸ್ಯೆ ಕುರಿತು ಹಾಗೂ ಏರ್ಪೋರ್ಟ್ ಗೆ ಹೆಚ್ಚುವರಿ ಬಸ್ ಬಿಡುವ ಕುರಿತು ಕೆಎಸ್ಆರ್ಟಿಸಿ ಡಿಸಿ ಯವರು ಪರಿಶೀಲಿಸಿ ಕ್ರಮ ವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಪಾಲ್ಗೊಂಡಿದ್ದರು. ಪಿಡಬ್ಲ್ಯೂಡಿ ವಿಶೇಷ ವಿಭಾಗದ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್ ಅನುಪಾಲನಾ ವರದಿ ಮಂಡಿಸಿದರು. ಆರ್ಟಿಓ ಮರುಗೇಂದ್ರಪ್ಪ, ಪೊಲೀಸ್ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
Shimoga, D. 26 : In-charge District Collector and G.P.M CEO Hemant N instructed the concerned officials to strictly take necessary measures to prevent possible accidents in the accident zones (black spots) identified on national and state highways of the district.
