ಶಿವಮೊಗ್ಗ, ಜೂ. 24: ಮನೆಯೊಂದರಲ್ಲಿ ನಗದು, ಚಿನ್ನಾಭರಣ, ಮೊಬೈಲ್ ಪೋನ್ ಕಳವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ ಘಟನೆ ನಡೆದಿದೆ.
ಶಿವಮೊಗ್ಗದ ಸೂಳೇಬೈಲು ಸಮೀಪದ ಈದ್ಗಾನಗರದ ನಿವಾಸಿ ತೌಸೀಫ್ ಯಾನೆ ತೌಸೀಫ್’ವುಲ್ಲಾ ಯಾನೆ ಟೈಗರ್ (24) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜೂ. 23 ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ 1.48 ಲಕ್ಷ ರೂ. ಮೌಲ್ಯದ 33 ಗ್ರಾಂ 850 ಮಿಲಿ ತೂಕದ ಚಿನ್ನದ ಆಭರಣಗಳು, ಒಂದು ಮೊಬೈಲ್ ಫೋನ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಠಾಣೆ ಇನ್ಸ್’ಪೆಕ್ಟರ್ ಅಂಜನ್ ಕುಮಾರ್, ಸಬ್ ಇನ್ಸ್’ಪೆಕ್ಟರ್ ವಸಂತ್ ಹೆಚ್.ಸಿ., ಉಮಾ ಪಾಟೀಲ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಘಟನೆ ಹಿನ್ನಲೆ: ಜೂ. 6 ರಂದು ಶಿವಮೊಗ್ಗದ ಅಶೋಕನಗರ ಬಡಾವಣೆಯ ಮನೆಯೊಂದರ ಬಾಗಿಲು ಮುರಿದು ಒಳ ಪ್ರವೇಶಿಸಿ, ಗ್ರಾಡ್ರೇಜ್ ಬೀರುವಿನಲ್ಲಿದ್ದ ಚಿನ್ನಾಭರಣ – ನಗದು – ಮೊಬೈಲ್ ಫೋನ್ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

