ಶಿವಮೊಗ್ಗ, ಜೂ. 24: ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದಲ್ಲಿ ಬಿಜಾಪುರದ ಯುವಕ ಹಾಗೂ ಬಳ್ಳಾರಿ ಜಿಲ್ಲೆಯ ಯುವತಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಿಜಾಪುರದ ಕೀರ್ತಿನಗರದ ಅಬ್ದುಲ್ ಖಯ್ಯುಂ (25) ಹಾಗೂ ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದ ಅರ್ಪಿತಾ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ನಗರದ ಹೊರವಲಯ ಹಳೇ ಗುರುಪುರದ ವಾಸದ ಮನೆಯೊಂದರಲ್ಲಿ, ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿರುವ ಕುರಿತಂತೆ ಪೊಲೀಸರಿಗೆ ಲಭ್ಯವಾದ ಖಚಿತ ವರ್ತಮಾನದ ಮೇರೆಗೆ, ಜೂ. 22 ರಂದು ಈ ಕಾರ್ಯಾಚರಣೆ ನಡೆಸಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್, ಸಬ್ ಇನ್ಸ್’ಪೆಕ್ಟರ್ ರಮೇಶ್ ಟಿ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಿಂದ 20 ಸಾವಿರ ರೂ. ಮೌಲ್ಯದ 466 ಗ್ರಾಂ ತೂಕದ ಒಣ ಗಾಂಜಾ, 60 ಎಂ.ಎಲ್. ಟೋಕರ್ ಜಿಆರ್’ಓ, ಟೋಕರ್ ಮೈಕ್ರೋ, ಟೋಕರ್ ಬ್ಲೂಮ್ ಹೆಸರಿನ ತಲಾ ಒಂದೊಂದು ಬಾಟಲಿಗಳು, 20 ಎಂ.ಎಲ್. ಕಾಲ್’ಮಾಗ್ ಬಾಟಲಿ,
120 ಎಂ.ಎಲ್. ಆಕ್ವಾಲಿನ್ಸ್ ಬಾಟಲಿ, ಎರಡು ಹುಕ್ಕಾ ಕೊಳವೆ, 900 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

