ಶಿವಮೊಗ್ಗ, ಜ. 15: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮಿನಕೊಪ್ಪದ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಇತ್ತೀಚೆಗೆ ಕಳ್ಳಕಾಕರ ಹಾವಳಿ ವಿಪರೀತವಾಗಿದೆ. ಇದು ಸ್ಥಳೀಯ ನಾಗರೀಕರ ನಿದ್ದೆಗೆಡುವಂತೆ ಮಾಡಿದೆ.
ಭಾನುವಾರ ರಾತ್ರಿ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಯ, ಮೂರ್ನಾಲ್ಕು ಕಡೆ ಕಳವು ಕೃತ್ಯಗಳು ನಡೆದಿವೆ. ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ವಾಹನದಿಂದ ಪೆಟ್ರೋಲ್ ತೆಗೆಯುವುದರ ಜೊತೆಗೆ, ಕೆಲ ವಸ್ತುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಉಳಿದಂತೆ ಕೆಲವೆಡೆ ನಿರ್ಮಾಣ ಹಂತದ ಕಟ್ಟಡಗಳ ಸ್ಥಳದ ಶೆಡ್ ಗಳ ಶೀಟ್ ಗಳನ್ನು ಕಿತ್ತು ಹಾಕಿ ಕಳವಿಗೆ ಯತ್ನಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಗಣಪತಿ ದೇವಾಲಯದ ಹುಂಡಿ ಒಡೆದು ಅದರೊಳಗಿದ್ದ ಸಾವಿರಾರು ರೂ. ಗಳನ್ನು ಕಳ್ಳರು ಅಪಹರಿಸಿದ್ದರು. ಮನೆಯೊಂದರ ಮುಂಭಾಗವಿದ್ದ ಕಬ್ಬಿಣದ ನೆಲಹಾಸನ್ನು ಕಳವು ಮಾಡಲಾಗಿತ್ತು ಎಂದು ನಿವಾಸಿಗಳು ತಿಳಿಸಿದ್ದಾರೆ.
‘ಬಡಾವಣೆಯ ಸುತ್ತಮುತ್ತ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಇದರ ಜೊತೆಗೆ ಗಾಂಜಾ, ಮದ್ಯ ವ್ಯಸನಿಗಳ ಹಾವಳಿಯಿದೆ. ಕ್ರಿಮಿನಲ್ಸ್ ಗಳಿಗೆ ಯಾವುದೇ ಭಯವಿಲ್ಲವಾಗಿದೆ. ಇದು ಸಹಜವಾಗಿಯೇ ಆತಂಕ ಉಂಟು ಮಾಡಿದೆ. ಪೊಲೀಸರು ಕಳ್ಳಕಾಕರ ಹಾವಳಿ ಕಡಿವಾಣಕ್ಕೆ ಕ್ರಮಕೈಗೊಳ್ಳಬೇಕು’ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

