ಶಿವಮೊಗ್ಗ (shivamogga), ಸೆ. 16: ಶಿವಮೊಗ್ಗ ನಗರದ ಹೊರವಲಯ ಮೋಜಪ್ಪನ ಹೊಸೂರು ಕ್ರಾಸ್ (mojappana hosuru) ಸಮೀಪದ ರಾಜ್ಯ ಹೆದ್ದಾರಿಯಲ್ಲಿ (state highway),ಇತ್ತೀಚೆಗೆ ಲಾರಿ – ಬೈಕ್ ಅಪಘಾತಕ್ಕೀಡಾದ ಸ್ಥಳದ ಬಳಿಯೇ, ಸೆ. 16 ರ ಸಂಜೆ ಮಾರುತಿ ಓಮ್ನಿಯೊಂದು ಜಾನುವಾರೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಹೋರಿಗೆ ಸಣ್ಣಪುಟ್ಟ ಗಾಯವಾಗಿದೆ.
ಕಾರ್ಗತ್ತಲು : ‘ಅಮರ್ ಗ್ರಾನೈಟ್ ಗೋಡೌನ್ (amar granite godown) ಬಳಿಯಿಂದ ಡಾಕ್ಟರ್ಸ್ ಕಾಲೋನಿ, ಮೋಜಪ್ಪನ ಹೊಸೂರು ಕ್ರಾಸ್ ವರೆಗಿನ ರಾಜ್ಯ ಹೆದ್ದಾರಿಯಲ್ಲಿ, ಸೂಕ್ತ ಬೀದಿ ದೀಪಗಳ (street lights) ವ್ಯವಸ್ಥೆಯಿಲ್ಲ. ಸಂಜೆಯಾಗುತ್ತಿದ್ದಂತೆ ಸದರಿ ಪ್ರದೇಶದಲ್ಲಿ ಕಾರ್ಗತ್ತಲು ಆವರಿಸುತ್ತದೆ. ಇದರಿಂದ ಸಂಜೆಯ ವೇಳೆ ಅಪಘಾತ (accident) ಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ’ ಎಂದು ವಾಹನ ಚಾಲಕರು ಹೇಳುತ್ತಾರೆ.
‘ಕೋಟೆಗಂಗೂರು ಗ್ರಾಮ ಪಂಚಾಯ್ತಿ (koteganguru grama panchayat) ವ್ಯಾಪ್ತಿಗೆ ಸದರಿ ಪ್ರದೇಶ ಬರುತ್ತದೆ. ಲೋಕೋಪಯೋಗಿ ಇಲಾಖೆ (pwd) ಹಾಗೂ ಕೋಟೆಗಂಗೂರು ಗ್ರಾಮ ಪಂಚಾಯ್ತಿ ಆಡಳಿತವು ನಾಗರೀಕರು ಹಾಗೂ ವಾಹನ ಸವಾರರ ಅನುಕೂಲಕ್ಕಾಗಿ, ಹೆದ್ದಾರಿಯಲ್ಲಿ ಸೂಕ್ತ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಾರೆ.

