ಶಿವಮೊಗ್ಗ (shivamogga), ನ. 17: ಮಾರುತಿ ಓಮ್ನಿ ಕಾರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ, ಶಿವಮೊಗ್ಗ ತಾಲೂಕಿನ ತೀರ್ಥಹಳ್ಳಿ ರಸ್ತೆಯ ಹೊನ್ನಾಪುರ ಗ್ರಾಮದ ಬಳಿ ನ. 17 ರ ಭಾನುವಾರ ಬೆಳಿಗ್ಗೆ ನಡೆದಿದೆ.
ಶಿವಮೊಗ್ಗ ನಗರದ ಇಮಾಮ್ ಲೇಔಟ್ ನಿವಾಸಿ ಮೊಹಮ್ಮದ್ ಸನಾವುಲ್ಲಾ ಎಂಬುವರಿಗೆ ಸದರಿ ಕಾರು ಸೇರಿದ್ದಾಗಿದೆ. ಇವರು ಕುಟುಂಬ ಸದಸ್ಯರೊಂದಿಗೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ವೇಳೆ ಘಟನೆ ನಡೆದಿದೆ.
ಕಾರಣನಿಮಿತ್ತ ಹೊನ್ನಾಪುರದ ಬಳಿ ರಸ್ತೆ ಬದಿ ಕಾರು ನಿಲ್ಲಿಸಿದ್ದ ವೇಳೆ, ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲಾರಂಭಿಸಿದೆ. ತಕ್ಷಣವೇ ಕಾರಿನಲ್ಲಿದ್ದವರು ಹೊರ ಓಡಿ ಬಂದಿದ್ದಾರೆ. ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ವಾಹನವು, ಕಾರಿಗೆ ಹೊತ್ತಿದ್ದ ಬೆಂಕಿ ನಂದಿಸುವಲ್ಲಿ ಸಫಲವಾಗಿದೆ. ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
The incident in which a Maruti Omni car accidentally caught fire and got burnt took place on Sunday morning, November 17, near Honnapura village on Tirthahalli road in Shimoga taluk.

