
election result | ಚನ್ನಪಟ್ಟಣ, ಸಂಡೂರು, ಶಿಗ್ಗಾವಿಯಲ್ಲಿ ಕಾಂಗ್ರೆಸ್ ಜಯಭೇರಿ ; ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಭಾರೀ ಶಾಕ್!
ವರದಿ : ಬಿ. ರೇಣುಕೇಶ್
ಬೆಂಗಳೂರು, ನ. 23: ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಂಪಾದಿಸಿದೆ. ಬಿಜೆಪಿ – ಜೆಡಿಎಸ್ ಮೈತ್ರಿಕೂಟ ಪರಾಭವಗೊಂಡಿದ್ದು, ತೀವ್ರ ಮುಖಭಂಗಕ್ಕೀಡಾಗಿದೆ!
ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಲಾ ಒಂದೊಂದು ಸ್ಥಾನದಲ್ಲಿ ಜಯ ಸಾಧಿಸಲಿವೆ ಎಂದು ಭವಿಷ್ಯ ಹೇಳಿದ್ದವು. ಆದರೆ ಈ ಎಲ್ಲ ಸಮೀಕ್ಷೆಗಳು ತಲೆಕೆಳಗಾಗಿವೆ. ಕಾಂಗ್ರೆಸ್ ಎಲ್ಲ ಕ್ಷೇತ್ರಗಳನ್ನು ತನ್ನ ಕೈ ವಶ ಮಾಡಿಕೊಂಡಿವೆ.
ಚನ್ನಪ್ಪಟ್ಟಣ : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ. ಕೊನೆ ಗಳಿಗೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿ ಪಿ ಯೋಗೇಶ್ವರ್ ಅವರು ಭರ್ಜರಿ ಜಯ ಸಂಪಾದಿಸಿದ್ದಾರೆ.
ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತೆ ಪರಾಭವಗೊಂಡಿದ್ದಾರೆ. ಇದು ಅವರ ಮೂರನೇ ಸೋಲಾಗಿದೆ.
ಸಿ ಪಿ ಯೋಗೇಶ್ವರ್ ಅವರಿಗೆ 1,12,642 ಮತ ಬಂದಿದೆ. ಅವರ ಸಮೀಪದ ಪ್ರತಿಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ಅವರಿಗೆ 87,229 ಮತಗಳು ಸಂದಾಯವಾಗಿವೆ. ಅಂತಿಮವಾಗಿ 25,413 ಮತಗಳ ಅಂತರದಲ್ಲಿ ಸಿ ಪಿ ಯೋಗೇಶ್ವರ್ ಗೆಲುವಿನ ನಗೆ ಬೀರಿದ್ದಾರೆ.
ಸಂಡೂರು : ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಹಿಡಿತ ಮುಂದುವರೆದಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರ ಪ್ರಬಲ ಪೈಪೋಟಿ ನಡುವೆಯೂ, ಸಂಸದ ತುಕರಾಂ ಅವರ ಪತ್ನಿ ಅನ್ನಪೂರ್ಣ ತುಕರಾಂ ಅವರು ಪ್ರಯಾಸದ ಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ನ ವಿಜೇತ ಅಭ್ಯರ್ಥಿ ಅನ್ನಪೂರ್ಣ ತುಕರಾಂ ಅವರು 93,616 ಮತ ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಂಗಾರು ಹನುಮಂತು ಅವರು 83,967 ಮತಳಿಸಿದ್ದಾರೆ. ಅಂತಿಮವಾಗಿ ಅನ್ನಪೂರ್ಣ ಅವರು 9649 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಮತಗಳಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಪೈಪೋಟಿವೊಡ್ಡಿದ್ದಾರೆ. ಆದರೆ ಜಯದ ದಡ ಸೇರುವಲ್ಲಿ ಅವರು ವಿಫಲರಾಗಿದ್ದಾರೆ.
ಶಿಗ್ಗಾವಿ : ಬಿಜೆಪಿ ಪಕ್ಷದ ಹಾಟ್ ಫೆವರೇಟ್ ಕ್ಷೇತ್ರವೆಂದೇ ಹೇಳಲಾಗಿದ್ದ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಅವರು ಭರ್ಜರಿ ಜಯ ಸಂಪಾದಿಸಿದ್ದಾರೆ.
ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರು ಪರಾಭವಗೊಂಡಿದ್ದಾರೆ.
ಕಾಂಗ್ರೆಸ್ ನ ವಿಜೇತ ಅಭ್ಯರ್ಥಿ ಯಾಸೀರ್ ಪಠಾಣ್ ಅವರು 1,00,756 ಮತ ಪಡೆದಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಭರತ್ ಬೊಮ್ಮಾಯಿ ಅವರು 87,308 ಮತಗಳಿಸಿದ್ದಾರೆ. ಅಂತಿಮವಾಗಿ ಯಾಸೀರ್ ಪಠಾಣ್ ಅವರು 13,448 ಮತಗಳ ಅಂತರದಲ್ಲಿ ವಿಜಯ ಸಂಪಾದಿಸಿದ್ದಾರೆ.
In the by-elections of Channapatna, Sandur and Shiggavi assembly constituencies, which witnessed heavy fighting, the ruling Congress party won a landslide victory. The BJP-JDS alliance has been defeated and is in serious disrepute!
Post-election polls had predicted that Congress, BJP and JDS would win one seat each. But all these surveys are upside down. Congress has captured all the constituencies.