
shimoga | ರಾಜ್ಯ ಬಜೆಟ್ : ಶಿವಮೊಗ್ಗ ಜಿಲ್ಲೆಯ ನಿರೀಕ್ಷೆಗಳೇನು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಫೆ. 9: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ, ಆಡಳಿತಗಾರರ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಶಿವಮೊಗ್ಗ ಜಿಲ್ಲೆಯ ಪ್ರಮುಖ ಬೇಡಿಕೆಗಳಿಗೆ ಪ್ರಸ್ತುತ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಆದ್ಯತೆ ದೊರಕಬೇಕಾಗಿದೆ. ವಿವರಗಳ ಪಟ್ಟಿ ಈ ಕೆಳಕಂಡಂತಿವೆ.
ಎಂಪಿಎಂ : ಭದ್ರಾವತಿ ನಗರದಲ್ಲಿರುವ ಸರ್ಕಾರಿ ಸ್ವಾಮ್ಯದ. ಮೈಸೂರು ಪೇಪರ್ ಮಿಲ್ (ಎಂಪಿಎಂ) ಕಾರ್ಖಾನೆ ಪುನಶ್ಚೇತನಕ್ಕೆ ಒತ್ತು ಸಿಗಬೇಕಾಗಿದೆ. ಕಾರ್ಖಾನೆಯನ್ನು ಮತ್ತೆ ಗತವೈಭವದತ್ತ ಕೊಂಡೊಯ್ಯುವ ಮೂಲಕ, ಉದ್ಯೋಗಾವಕಾಶ ಸೃಷ್ಟಿಗೆ ಕ್ರಮಕೈಗೊಳ್ಳುವುದು.
ಪೊಲೀಸ್ ಕಮೀಷನರೇಟ್ : ನಗರ ಬೆಳವಣಿಗೆ, ಜನಸಂಖ್ಯೆಗೆ, ಅಪರಾಧ ಪ್ರಕರಣಗಳಿಗೆ ಅನುಗುಣವಾಗಿ ಶಿವಮೊಗ್ಗ – ಭದ್ರಾವತಿ ನಗರಗಳನ್ನೊಳಗೊಂಡಂತೆ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪಿಸಬೇಕು. ಶಿವಮೊಗ್ಗ ನಗರ – ತಾಲೂಕು ವ್ಯಾಪ್ತಿಯಲ್ಲಿ ಹೊಸದಾಗಿ ನಾಲ್ಕು ಪೊಲೀಸ್ ಠಾಣೆ, ಸಾಗರದಲ್ಲಿ ಪ್ರತ್ಯೇಕ ಟ್ರಾಫಿಕ್ ಠಾಣೆ ಸ್ಥಾಪನೆಯಾಗಬೇಕು.
ಹೊಸ ತಾಲೂಕು ಕೇಂದ್ರ : ಸ್ವಾತಂತ್ರ್ಯ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ ಒಂದೇ ಒಂದು ತಾಲೂಕು ರಚನೆಯಾಗಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ಹೊಸ ತಾಲೂಕುಗಳ ರಚನೆ ಅಗತ್ಯವಿದೆ. ಶಿವಮೊಗ್ಗ ನಗರ – ಗ್ರಾಮಾಂತರ ಪ್ರತ್ಯೇಕ ತಾಲೂಕುಗಳ ರಚನೆ, ಸೊರಬ ತಾಲೂಕಿನ ಆನವಟ್ಟಿ ಹಾಗೂ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ತಾಲೂಕು ಕೇಂದ್ರಗಳ ರಚನೆಯಾಗಬೇಕು.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ : ಶಿವಮೊಗ್ಗದಲ್ಲಿ ಈಗಾಗಲೇ ಸರ್ಕಾರಿ ಮೆಡಿಕಲ್ ಕಾಲೇಜ್, ಆಯುರ್ವೇದ ಕಾಲೇಜ್, ಕೃಷಿ ವಿಶ್ವವಿದ್ಯಾಲಯಗಳಿವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭದ್ರಾವತಿ ಸರ್ಕಾರಿ ಐಟಿಐ ಕಾಲೇಜ್ ನಲ್ಲಿ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಆರಂಭವಾಗಬೇಕಾಗಿದೆ.
ಆಯುಷ್ ವಿಶ್ವವಿದ್ಯಾಲಯ : ದಕ್ಷಿಣ ಭಾರತದ ಮೊಟ್ಟಮೊದಲ ಆಯುಷ್ ವಿಶ್ವವಿದ್ಯಾಲಯವನ್ನು ಶಿವಮೊಗ್ಗದಲ್ಲಿ ಸ್ಥಾಪನೆ ಮಾಡಲು ಕಳೆದ ಹಲವು ವರ್ಷಗಳ ಹಿಂದಿನ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅಗತ್ಯ ಭೂಮಿ ಕಾಯ್ದಿರಿಸಲಾಗಿದೆ. ಆದರೆ ಇಲ್ಲಿಯವರೆಗೂ ಆಯುಷ್ ವಿವಿ ಕಾರ್ಯಾರಂಭ ಮಾಡಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಾಗಬೇಕಾಗಿದೆ.
ನೀರು ಶುದ್ಧೀಕರಣ ಘಟಕ : ಶಿವಮೊಗ್ಗ ನಗರದ ಬೆಳವಣಿಗೆಗೆ ಅನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ದಿಯಾಗುತ್ತಿಲ್ಲ. ಭವಿಷ್ಯದ ನಗರದ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳು ಅಭಿವೃದ್ದಿಯಾಗಬೇಕು. ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ, ತುಂಗಾ ಜಲಾಶಯದ ಬಳಿ ಮತ್ತೊಂದು ಅತ್ಯಾಧುನಿಕ ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಬೇಕಾಗಿದೆ.
ಕೈಗಾರಿಕಾ ಬೆಳವಣಿಗೆ : ಕೇಂದ್ರ ಸರಕಾರ ಘೋಷಿಸಿರುವ ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ನಲ್ಲಿ ಶಿವಮೊಗ್ಗ ಬರುವುದಿಲ್ಲ. ಇದಕ್ಕೆ ಪೂರಕವಾಗಿ ಶಿವಮೊಗ್ಗ, ದಾವಣಗೆರೆ ಅಥವಾ ಶಿವಮೊಗ್ಗ ಚಿತ್ರದುರ್ಗ ಮಾರ್ಗದಲ್ಲಿ ಕೈಗಾರಿಕಾ ಕಾರಿಡಾರ್ ಮಾಡಬೇಕು. ಹೊಸ ಕೈಗಾರಿಕೆ, ಉದ್ದಿಮೆಗಳ ಸ್ಥಾಪನೆಯಾಗಬೇಕು. ಈ ಮೂಲಕ ಉದ್ಯೋಗಾವಕಾಶ ಸೃಷ್ಟಿಗೆ ಕ್ರಮಕೈಗೊಳ್ಳಬೇಕು.
ಉಳಿದಂತೆ ಈ ಹಿಂದಿನ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಫುಡ್ ಪಾರ್ಕ್ ನಿರ್ಮಾಣಕ್ಕೆ ಅನುದಾನ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಕ್ರಮ, ಕೇಂದ್ರ – ರಾಜ್ಯ ಸರ್ಕಾರದ ಸಹಭಾಗಿತ್ವದ ರೈಲ್ವೆ ಯೋಜನೆಗಳಿಗೆ ಅನುದಾನ, ಕೃಷಿ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಸೇರಿದಂತೆ ಜಿಲ್ಲೆಯ ವಿವಿಧ ಯೋಜನೆಗಳಿಗೆ ಅವಕಾಶ ಸಿಗಬೇಕಾಗಿದೆ.
shimoga | State budget : What are the expectations of Shimoga district?
Shimoga, Feb 9: The important demands of Shimoga district, which has been neglected for many years, need to be prioritized in the budget of the current state government. List of details are as follows. #statebudget, #budget, #karnatakabudget,