ಶಿವಮೊಗ್ಗ (shivamogga), ಜು. 3: ಶಿವಮೊಗ್ಗ ಪಾಲಿಕೆ ವ್ಯಾಪ್ತಿ 1 ನೇ ವಾರ್ಡ್ ಸೋಮಿನಕೊಪ್ಪದ ವಿವಿಧ ಪ್ರದೇಶಗಳಿಗೆ, ಜು. 3 ರಂದು ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ (ಇಇ) ಪುಟ್ಟಯ್ಯ ಜೆ ಅವರು ಭೇಟಿಯಿತ್ತು ಕುಡಿಯುವ ನೀರು ಪೂರೈಕೆ ಕುರಿತಂತೆ ಪರಿಶೀಲಿಸಿದರು.
ಇತ್ತೀಚೆಗೆ ಬೊಮ್ಮನಕಟ್ಟೆ ಬಳಿ ಓವರ್ ಹೆಡ್ ಟ್ಯಾಂಕ್ ಗಳಿಗೆ ನೀರು ಪೂರೈಕೆಯಾಗುವ ಪೈಪ್ ಲೈನ್ ಹೊಡೆದ ಪರಿಣಾಮ, ಕೆಲ ದಿನಗಳಿಂದ ಸೋಮಿನಕೊಪ್ಪ ಸುತ್ತಮುತ್ತಲಿನ ಬಡಾವಣೆಗಳಲ್ಲಿ 24*7 ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ಈ ಹಿನ್ನೆಲೆಯಲ್ಲಿ ಪುಟ್ಟಯ್ಯ ಜೆ ಅವರು ಭೇಟಿಯಿತ್ತು ಪರಿಶೀಲಿಸಿದರು. ನಾಗರೀಕರ ಅಹವಾಲು ಆಲಿಸಿದರು. ಈಗಾಗಲೇ ಪೈಪ್ ಲೈನ್ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. ಇಂದು ಸಂಜೆಯಿಂದಲೇ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ನಾಗರೀಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿ 24*7 ಕುಡಿಯುವ ನೀರು ಕಾಮಗಾರಿಯ ಗುಂಡಿಗಳನ್ನು ಮುಚ್ಚಲು ಹಾಗೂ ಬಾಕಿಯಿರುವ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ತುರ್ತು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಲ ಮಂಡಳಿ ಸಹಾಯಕ ಎಂಜಿನಿಯರ್ ಜೀವನ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Shivamogga, Jul. 3: On Jul 3, Karnataka Water Supply and Drainage Board Executive Engineer (EE) Puttaiah J visited various areas of Sominakoppa, Ward 1, under the jurisdiction of Shivamogga Corporation, and inspected the drinking water supply.

