public problem | ಪರಿಹಾರವಾಗದ ವಿಭಾಗ ಪತ್ರ ಗೊಂದಲ : ಮುಂದುವರಿದ ಕೌಟಂಬಿಕ ಕಲಹ – ಕಣ್ಮುಚ್ಚಿ ಕುಳಿತಿದೆಯೇ ಆಡಳಿತ?

public problem | Unresolved division letter confusion: Continuing family feud – is the administration turning a blind eye? ಪರಿಹಾರವಾಗದ ವಿಭಾಗ ಪತ್ರ ಗೊಂದಲ : ಮುಂದುವರಿದ ಕೌಟಂಬಿಕ ಕಲಹ – ಕಣ್ಮುಚ್ಚಿ ಕುಳಿತಿದೆಯೇ ಆಡಳಿತ?

ಶಿವಮೊಗ್ಗ (shivamogga), ಜು. 26: ಪಿತ್ರಾರ್ಜಿತ ಸ್ಥಿರಾಸ್ತಿಯನ್ನು ಕುಟುಂಬ ಸದಸ್ಯರು ಹಂಚಿಕೆ ಮಾಡಿಕೊಳ್ಳುವ, ‘ವಿಭಾಗ ಪತ್ರ’ ವ್ಯವಸ್ಥೆಯು ಅಕ್ಷರಶಃ ಗೊಂದಲದ ಗೂಡಾಗಿ ಪರಿಣಮಿಸಿದೆ. ಹಲವು ತಿಂಗಳುಗಳಿಂದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ, ವಿಭಾಗ ಪತ್ರ ನೊಂದಣಿ ಅಸ್ತವ್ಯಸ್ತವಾಗಿದೆ. ಆದರೆ ಇಲ್ಲಿಯವರೆಗೂ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿಲ್ಲ. ದಿವ್ಯ ನಿರ್ಲಕ್ಷ್ಯವಹಿಸಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಆಡಳಿತದ ನಿರ್ಲಕ್ಷ್ಯದಿಂದ ಧೋರಣೆಯಿಂದ ಪಿತ್ರಾರ್ಜಿತ ಆಸ್ತಿ ಹಂಚಿಕೊಳ್ಳಲು ಸಾಧ್ಯವಾಗದೆ ಕುಟುಂಬ ಸದಸ್ಯರು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಸೂಕ್ತ ಮಾಹಿತಿಯಿಲ್ಲದೆ ಪರದಾಡುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.

ಹಾಗೆಯೇ ಕೌಟಂಬಿಕ ವಿರಸ – ಕಲಹಗಳು ಹೆಚ್ಚಾಗಲಾರಂಭಿಸಿದೆ. ಮನೆ ಸದಸ್ಯರಲ್ಲಿ ವೈಮನಸ್ಸು, ಭಿನ್ನಾಭಿಪ್ರಾಯಗಳು ತಲೆದೋರಲಾರಂಭಿಸಿರುವ ಮಾಹಿತಿಗಳು ಕೇಳಿಬರಲಾರಂಭವಿಸಿವೆ.

ಏನೀದು ಸಮಸ್ಯೆ? : ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ, ಸರಿಸುಮಾರು 1 ವರ್ಷದಿಂದ ಕುಟುಂಬ ಸದಸ್ಯರು, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಿಯಮಾನುಸಾರ ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಬ್ ರಿಜಿಸ್ಟ್ರಾರ್ ಕಚೇರಿ ಮೂಲಗಳು ಮಾಹಿತಿ ನೀಡುತ್ತವೆ.

ಕಂದಾಯ ಇಲಾಖೆಗೆ ಸಂಬಂಧಿಸಿದ ಕಾವೇರಿ, ಭೂಮಿ ತಂತ್ರಾಂಶ (ಸಾಫ್ಟ್’ವೇರ್) ದ ಜೊತೆಗೆ ಕಳೆದ ವರ್ಷ ಇ – ಆಸ್ತಿ ತಂತ್ರಾಂಶ ಇಂಟಿಗ್ರೇಡ್ ಮಾಡಲಾಗಿತ್ತು. ತದನಂತರ ವಿಭಾಗ ಪತ್ರ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಓರ್ವರಿಗೆ ಮಾತ್ರ ಅವಕಾಶ : ವಿಭಾಗ ಪತ್ರ ಮಾಡಿಕೊಳ್ಳುವ ಸಂದರ್ಭದಲ್ಲಿ, ಪಿತ್ರಾರ್ಜಿತ ಸ್ಥಿರಾಸ್ತಿಯನ್ನು ಕುಟುಂಬ ಸದಸ್ಯರು ಯಾರಿಗೆ ಎಷ್ಟು ಎಂಬುವುದನ್ನು ನಿರ್ಧರಿಸಿಕೊಂಡು ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ನಿಯಮಾನುಸಾರ ನೊಂದಣಿ ಮಾಡಿಸಿಕೊಳ್ಳುತ್ತಿದ್ದರು. ತದನಂತರ ಸ್ಥಳಿಯಾಡಳಿತಗಳಲ್ಲಿ ಖಾತೆ ಮಾಡಿಕೊಳ್ಳುತ್ತಿದ್ದರು.

ಪ್ರಸ್ತುತ ಕುಟುಂಬ ಸದಸ್ಯರೆಲ್ಲರೂ ಆಸ್ತಿ ಹಂಚಿಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಕುಟುಂಬದ ಕೇವಲ ಓರ್ವ ಸದಸ್ಯರಿಗೆ ಮಾತ್ರ ಇಡೀ ಪಿತ್ರಾರ್ಜಿತ ಆಸ್ತಿಯನ್ನು ನೊಂದಣಿ ಮಾಡಬಹುದಾಗಿದೆ! ಉಳಿದ ಸದಸ್ಯರಿಗೆ ಆಸ್ತಿ ಹಂಚಿಕೆ ಮಾಡಲು ಸಾಧ್ಯವಾಗದಂತಾಗಿದೆ.

ಈ ಗೊಂದಲದ ಕಾರಣದಿಂದ ಕುಟುಂಬ ಸದಸ್ಯರು ವಿಭಾಗ ಪತ್ರ ಮಾಡಿಸಿಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ. ಇದು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಗೊಂದಲಕ್ಕೆ ಕಾರಣವಾಗಿದೆ. ಕೆಲ ಕುಟುಂಬ ಸದಸ್ಯರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸುತ್ತಿರುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ.

ಗಮನಿಸಲಿ : ಸದರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಮುದ್ರಾಂಕ – ನೊಂದಣಿ, ಪೌರಾಡಳಿತ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ವರ್ಷವೇ ಕಳೆದರು ಸಮಸ್ಯೆಗೆ ಪರಿಹಾರ ದೊರಕಿಲ್ಲ. ಸಂಬಂಧಿಸಿದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ನಾಗರೀಕರು ತೊಂದರೆಗೆ ಸಿಲುಕುವಂತಾಗಿದೆ ಎಂಬ ಆರೋಪಗಳು ನಾಗರೀಕ ವಲಯದಿಂದ ಕೇಳಿಬರುತ್ತಿದೆ.

ಹೋರಾಟ ಅನಿವಾರ್ಯ : ‘ವಿಭಾಗ ಪತ್ರ ಗೊಂದಲದ ಗೂಡಾಗಿ ಪರಿಣಮಿಸಿದೆ. ನಾಗರೀಕರ ಸಂಕಷ್ಟ ಹೇಳತೀರದಾಗಿದೆ.  ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ. ವರ್ಷವೇ ಉರುಳಿದರೂ ಇಲ್ಲಿಯವರೆಗೂ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಾರ್ಯವಾಗಿಲ್ಲ. ಕಾಲಮಿತಿಯೊಳಗೆ ಸಂಬಂಧಿಸಿದ ಇಲಾಖೆಗಳು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಕರ್ನಾಟಕ ರಾಜ್ಯ ಅಧಿಕೃತ ಪತ್ರ ಬರಹಗಾರರ ಸಂಘದ ಉಪಾಧ್ಯಕ್ಷ ಜಿ ಎಂ ಸುರೇಶ್ ಬಾಬು ಅವರು ಎಚ್ಚರಿಕೆ ನೀಡಿದ್ಧಾರೆ.

*** ‘ವಿಭಾಗ ಪತ್ರ ಗೊಂದಲದ ಗೂಡಾಗಿ ಪರಿಣಮಿಸಿದೆ. ನಾಗರೀಕರ ಸಂಕಷ್ಟ ಹೇಳತೀರದಾಗಿದೆ.  ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ. ವರ್ಷವೇ ಉರುಳಿದರೂ ಇಲ್ಲಿಯವರೆಗೂ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಾರ್ಯವಾಗಿಲ್ಲ. ಕಾಲಮಿತಿಯೊಳಗೆ ಸಂಬಂಧಿಸಿದ ಇಲಾಖೆಗಳು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಕರ್ನಾಟಕ ರಾಜ್ಯ ಅಧಿಕೃತ ಪತ್ರ ಬರಹಗಾರರ ಸಂಘದ ಉಪಾಧ್ಯಕ್ಷ ಜಿ ಎಂ ಸುರೇಶ್ ಬಾಬು ಅವರು ಎಚ್ಚರಿಕೆ ನೀಡಿದ್ಧಾರೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →