shimoga | ಶಿವಮೊಗ್ಗ : ಶಾಲಾ ಮಕ್ಕಳ ಪಾಲಿಗೆ ಅಪಾಯಕಾರಿಯಾದ ಹೆದ್ಧಾರಿ – ಗಮನಹರಿಸುವರೆ ಡಿಸಿ, ಎಸ್ಪಿ, ಆಯುಕ್ತರು?

Shivamogga: A dangerous road for school children - should the DC, SP, and Commissioner pay attention? ಶಿವಮೊಗ್ಗ : ಶಾಲಾ ಮಕ್ಕಳ ಪಾಲಿಗೆ ಅಪಾಯಕಾರಿಯಾದ ಹೆದ್ಧಾರಿ - ಗಮನಹರಿಸುವರೆ ಡಿಸಿ, ಎಸ್ಪಿ, ಆಯುಕ್ತರು?

ಶಿವಮೊಗ್ಗ(shivamogga), ಆಗಸ್ಟ್ 2: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದ ಸರ್ಕಾರಿ ಶಾಲೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಬಳಿ ಇಲ್ಲಿಯವರೆಗೂ ಸಿಗ್ನಲ್ ಲೈಟ್ ಅಳವಡಿಕೆಯಾಗಿಲ್ಲ. ಇದರಿಂದ ನೂರಾರು ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ಹೆದ್ದಾರಿ ದಾಟಿ ಶಾಲೆ – ಮನೆಗೆ ಓಡಾಡುವಂತಾಗಿದೆ!

ಸರ್ಕಾರಿ ಶಾಲೆ ಬಳಿಯ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ ಅಳವಡಿಸಲು ನಿರ್ಧರಿಸಲಾಗಿತ್ತು. ಈ ಕುರಿತಂತೆ ಪೊಲೀಸ್ ಇಲಾಖೆ ವರದಿ ಕೂಡ ಸಿದ್ದಪಡಿಸಿ, ಸಿಗ್ನಲ್ ಲೈಟ್ ಅಳವಡಿಕೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಪಾಲಿಕೆ ಆಡಳಿತಕ್ಕೆ0 ಪತ್ರ ಬರೆದಿತ್ತು.

ಈ ನಡುವೆ ಸದರಿ ಹೆದ್ದಾರಿಯ ಕುರಿತಂತೆ ಮಾಧ್ಯಮಗಳಲ್ಲಿ ಬಂದ ವರದಿಯ ಆಧಾರದ ಮೇಲೆ, ಸಿಎಂ ಕಚೇರಿಯ ಕುಂದುಕೊರತೆ ವಿಭಾಗ ಕೂಡ ಸೂಕ್ತ ಸುರಕ್ಷಿತ ಕ್ರಮಗಳ ಪಾಲನೆ ಮಾಡುವಂತೆ ಪಾಲಿಕೆ ಆಡಳಿತಕ್ಕೆ ಸೂಚನೆ ನೀಡಿತ್ತು.

ಇಷ್ಟೆಲ್ಲದರ ಹೊರತಾಗಿಯೂ ಸದರಿ ಸರ್ಕಲ್ ಬಳಿ ಸಿಗ್ನಲ್ ಲೈಟ್ ಅಳವಡಿಕೆಯಾಗಿಲ್ಲ. ಮತ್ತೊಂದೆಡೆ, ಟ್ರಾಫಿಕ್ ಪೊಲೀಸರು ಹೆದ್ದಾರಿಯ ನಾಲ್ಕು ಕಡೆ ವಾಹನಗಳ ವೇಗ ನಿಯಂತ್ರಣಕ್ಕೆ ಹಾಕಿದ್ದ ಬ್ಯಾರಿಕೇಡ್ ಗಳನ್ನು ಕೂಡ ಇತ್ತೀಚೆಗೆ ತೆರವುಗೊಳಿಸಲಾಗಿದೆ.

ಇದರಿಂದ ವಿದ್ಯಾರ್ಥಿಗಳು ಹೆದ್ಧಾರಿ ದಾಟಿ ಶಾಲೆ ಹಾಗೂ ಮನೆಗೆ ಓಡಾಡಲು ಸಂಕಷ್ಟ ಪಡುವಂತಾಗಿದೆ. ಮಕ್ಕಳ ನೆರವಿಗೆ ದಾವಿಸುವವರು ಯಾರು ಇಲ್ಲದಂತಾಗಿದೆ ಎಂದು ಸ್ಥಳೀಯ ನಾಗರೀಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಗಮನಹರಿಸಿಲ್ಲ: ಹೆದ್ದಾರಿಗೆ ಹೊಂದಿಕೊಂಡಂತೆ ಸರ್ಕಾರಿ ಶಾಲೆಯಿದೆ. ನೂರಾರು ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಹೆದ್ದಾರಿಯು ವಿದ್ಯಾರ್ಥಿಗಳ ಪಾಲಿಗೆ ಅಕ್ಷರಶಃ ಯಮಸ್ವರೂಪಿಯಾಗಿದೆ.

ಸದರಿ ಪ್ರದೇಶ ನಗರ ವ್ಯಾಪ್ತಿಯಲ್ಲಿದ್ದರೂ ಮಿತಿಮೀರಿದ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಇದರಿಂದ ಶಾಲಾ ಮಕ್ಕಳು ರಸ್ತೆ ದಾಟಿ ಹೋಗುವುದು ದುಸ್ತರವಾಗಿ ಪರಿಣಮಿಸಿದೆ. ಈ ಹಿಂದೆ ಸಂಭವಿಸಿದ ಅಪಘಾತದ ವೇಳೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

ಶಾಲಾ ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ಸುರಕ್ಷತಾ ಕ್ರಮಕೈಗೊಳ್ಳುವಂತೆ ಈ ಹಿಂದೆ, ರಾಷ್ಟ್ರೀಯ ಹೆದ್ಧಾರಿ ಇಲಾಖೆ ಎಂಜಿನಿಯರ್ ಗಳಿಗೆ ಮನವಿ ಮಾಡಲಾಗಿತ್ತು. ಶಾಲಾ ಮಕ್ಕಳ ಸಂಚಾರಕ್ಕೆ ಸ್ಕೈ ವಾಕರ್ ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದ್ದರು. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮತ್ತೊಂದೆಡೆ, ಸಂಚಾರಿ ಠಾಣೆ ಪೊಲೀಸರು ಕೂಡ ವಾಹನಗಳ ವೇಗ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಅಪಘಾತಗಳ ಕಾರಣದಿಂದಲೇ, ಈ ಹಿಂದೆ ರಸ್ತೆಗೆ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಏಕಾಏಕಿ ತೆಗೆಯಲಾಗಿದೆ. ಶಾಲಾ ಮಕ್ಕಳ ಸುರಕ್ಷತಾ ಸಂಚಾರಕ್ಕೆ ಯಾವುದೇ ಕ್ರಮಗಳ ಪಾಲನೆಯೂ ಮಾಡಿಲ್ಲ.

ಭವಿಷ್ಯದಲ್ಲಿ ದೊಡ್ಡ ಅನಾಹುತ ಸಂಭವಿಸುವ ಮುನ್ನ ಇನ್ನಾದರೂ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕು. ಸರ್ಕಾರಿ ಶಾಲೆ ಸಮೀಪದ ಹೆದ್ದಾರಿಯಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಮಾಡಬೇಕು. ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಹಾಕಬೇಕು.

ಟ್ರಾಫಿಕ್ ಪೊಲೀಸರನ್ನು ಕರ್ತವ್ಯತಕ್ಕೆ ನಿಯೋಜನೆ ಮಾಡಬೇಕು. ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಆದ್ಯ ಗಮನಹರಿಸಬೇಕಾಗಿದೆ ಎಂದು ಸ್ಥಳೀಯ ನಾಗರೀಕರು ಆಗ್ರಹಿಸುತ್ತಾರೆ.

Shivamogga, August 2: A signal light has not been installed on the national highway near the government school in Gadikoppa on the outskirts of Shivamogga city. This has led to hundreds of students risking their lives to cross the highway to go to school and home!

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →