ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 23: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ವು, ಮಲ್ಲಿಗೇನಹಳ್ಳಿಯ ವಾಜಪೇಯಿ ಲೇಔಟ್ ನ 200 ಅಡಿ ಹೊರ ವರ್ತುಲ ರಸ್ತೆಯನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿಗೆ ನಿರ್ಧರಿಸಿದೆ.
ಪ್ರಥಮ ಹಂತದಲ್ಲಿ ಒಟ್ಟಾರೆ 1.5 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆಯನ್ನು, 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಗೊಳಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಪ್ರಾಧಿಕಾರವು, ಮಾಸ್ಟರ್ ಪ್ಲ್ಯಾನ್ (ಮಹಾ ಯೋಜನೆ) ನಲ್ಲಿ ಗುರುತಿಸಲಾದ ಹೊರ ವರ್ತುಲ ರಸ್ತೆ ಅಭಿವೃದ್ದಿಗೆ ಕ್ರಮಕೈಗೊಂಡಿದೆ.
‘ಮಲ್ಲಿಗೇನಹಳ್ಳಿಯಲ್ಲಿ ಪ್ರಾಧಿಕಾರದಿಂದ ಅಭಿವೃದ್ದಿಪಡಿಸಲಾದ ವಾಜಪೇಯಿ ಬಡಾವಣೆಯಲ್ಲಿ ಮಹಾ ಯೋಜನೆಯಡಿ 200 ಅಡಿ ಹೊರ ವರ್ತುಲ ರಸ್ತೆ ಬಿಡಲಾಗಿದೆ. ಸದರಿ ರಸ್ತೆಯ 1.5 ಕಿ.ಮೀ. ಉದ್ದವನ್ನು ಅಭಿವೃದ್ದಿಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಯಮಾನುಸಾರ ರಸ್ತೆ ಅಭಿವೃದ್ದಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಪ್ರಾಧಿಕಾರದ ಆಯುಕ್ತರಾದ ವಿಶ್ವನಾಥ ಪಿ ಮುದಜ್ಜಿ ಅವರು ಅಕ್ಟೋಬರ್ 23 ರಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹತ್ವದ ಕ್ರಮ : ಪ್ರಾಧಿಕಾರದ ಮಹಾ ಯೋಜನೆಯಲ್ಲಿ 200 ಅಡಿ ಹೊರ ವರ್ತುಲ ರಸ್ತೆ ಹಾದು ಹೋಗುವ ಪ್ರದೇಶಗಳನ್ನು ಗುರುತಿಸಲಾಗಿದೆ. ಇದೀಗ ಹೊರ ವರ್ತುಲ ರಸ್ತೆಯ ಅಭಿವೃದ್ದಿಗೆ ಅನುದಾನ ಮೀಸಲಿರಿಸಿ, ಅಭಿವೃದ್ದಿಗೆ ಕ್ರಮಕೈಗೊಂಡಿರುವುದು ಹೊಸ ಬೆಳವಣಿಗೆಯಾಗಿದೆ.
ಮುಂದಿನ ದಿನಗಳಲ್ಲಿ ಮಲ್ಲಿಗೇನಹಳ್ಳಿ, ಕೋಟೆಗಂಗೂರು, ಸೋಮಿನಕೊಪ್ಪದವರೆಗಾದರೂ ಪ್ರಾಧಿಕಾರವು ಹೊರ ವರ್ತುಲ ರಸ್ತೆ ಅಭಿವೃದ್ದಿಗೆ ಕ್ರಮಕೈಗೊಳ್ಳಬೇಕು. ಇದರಿಂದ ಸದರಿ ಭಾಗದ ರಸ್ತೆ ಸಂಪರ್ಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆ ಎಂದು ಈ ಭಾಗದ ನಾಗರೀಕರ ಅಭಿಪ್ರಾಯವಾಗಿದೆ.
2 ನೇ ಹಂತದ ರಿಂಗ್ ರೋಡ್ : ಸಂಸದರು ಗಮನಹರಿಸಲಿ?

*** ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಭೂ ಸಾರಿಗೆ ಇಲಾಖೆ ಮೂಲಕ, ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೆ ಬೈಪಾಸ್ ರಸ್ತೆ ಅಭಿವೃದ್ದಿಗೆ ಕ್ರಮಕೈಗೊಂಡಿದ್ಧಾರೆ. ಈಗಾಗಲೇ ಮೊದಲ ಹಂತದಲ್ಲಿ ಹರಕೆರೆಯಿಂದ ಶ್ರೀರಾಂಪುರದವರೆಗೆ ರಸ್ತೆ ನಿರ್ಮಾಣ ಮಾಡಲಾಗಿದೆ. ಎರಡನೇ ಹಂತದ ಬೈಪಾಸ್ ರಸ್ತೆ ನಿರ್ಮಾಣ ಯೋಜನೆ ಸಿದ್ದಪಡಿಸಲಾಗಿದೆ. ಆದರೆ ಇದಕ್ಕೆ ಇಲ್ಲಿಯವರೆಗೂ ಕೇಂದ್ರ ಭೂ ಸಾರಿಗೆ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ.
ಪ್ರಾಧಿಕಾರದ ಮಹಾ ಯೋಜನೆಯಡಿ ಮಲ್ಲಿಗೇನಹಳ್ಳಿ, ಕೋಟೆಗಂಗೂರು, ಸೋಮಿನಕೊಪ್ಪ, ಬಸವನಗಂಗೂರು, ಮತ್ತೋಡು ಮತ್ತೀತರ ಪ್ರದೇಶಗಳ ಮೂಲಕ ಹೊರ ವರ್ತುಲ ರಸ್ತೆ ಗುರುತಿಸಲಾಗಿದೆ. ಸದರಿ ಹೊರ ವರ್ತುಲ ರಸ್ತೆಯನ್ನೇ, 2 ನೇ ಹಂತದ ಬೈಪಾಸ್ ರಸ್ತೆ ಅಭಿವೃದ್ದಿಗೆ ಸಂಸದರು ಪರಿಗಣಿಸಿದರೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ರಿಂಗ್ ರೋಡ್ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸುವರೆ ಅಧ್ಯಕ್ಷರು?

*** ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರು, ವಾಜಪೇಯಿ ಲೇಔಟ್ ನಲ್ಲಿ 1.5 ಕಿ.ಮೀ. ಉದ್ದದ ವರ್ತುಲ ರಸ್ತೆ ಅಭಿವೃದ್ದಿಗೆ ಕ್ರಮಕೈಗೊಂಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಹಾಗೆಯೇ ಮೊದಲ ಹಂತದಲ್ಲಿ ಮಲ್ಲಿಗೇನಹಳ್ಳಿ – ಕೋಟೆಗಂಗೂರು – ಸೋಮಿನಕೊಪ್ಪದವರೆಗೆ ಪ್ರಾಧಿಕಾರದಿಂದಲೆ ರಿಂಗ್ ರೋಡ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಇದಕ್ಕೆ ಅಗತ್ಯವಾದ ಅನುದಾನವನ್ನು ರಾಜ್ಯ ಸರ್ಕಾರದಿಂದ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರು ಚಿತ್ತ ಹರಿಸಬೇಕಾಗಿದೆ.
‘ಹೊರ ವರ್ತುಲ ರಸ್ತೆ ಅಭಿವೃದ್ದಿಗೆ ಕ್ರಮ’ : ಆಯುಕ್ತ ವಿಶ್ವನಾಥ ಪಿ ಮುದಜ್ಜಿ

‘ಮಲ್ಲಿಗೇನಹಳ್ಳಿಯಲ್ಲಿ ಪ್ರಾಧಿಕಾರದಿಂದ ಅಭಿವೃದ್ದಿಪಡಿಸಲಾದ ವಾಜಪೇಯಿ ಬಡಾವಣೆಯಲ್ಲಿ ಮಹಾ ಯೋಜನೆಯಡಿ 200 ಅಡಿ ಹೊರ ವರ್ತುಲ ರಸ್ತೆ ಬಿಡಲಾಗಿದೆ. ಸದರಿ ರಸ್ತೆಯ 1.5 ಕಿ.ಮೀ. ಉದ್ದವನ್ನು ಅಭಿವೃದ್ದಿಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಯಮಾನುಸಾರ ರಸ್ತೆ ಅಭಿವೃದ್ದಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಪ್ರಾಧಿಕಾರದ ಆಯುಕ್ತರಾದ ವಿಶ್ವನಾಥ ಪಿ ಮುದಜ್ಜಿ ಅವರು ಅಕ್ಟೋಬರ್ 23 ರಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದ್ದಾರೆ.

